ಆಗೂರನ ಹೇಳಿಕೆಗಳು
30
ಜಾಕೆ ಎಂಬುವನ ಮಗನಾದ ಆಗೂರನ ದೈವಿಕ ಬುದ್ಧಿಮಾತುಗಳು.
ಇವನು ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು:*
 
“ದೇವರೇ, ನಾನು ದಣಿದಿದ್ದೇನೆ,
ಆದರೆ ನಾನು ಜಯಶಾಲಿಯಾಗುವೆನು.
ಖಂಡಿತವಾಗಿಯೂ ನಾನು ಮನುಷ್ಯನಲ್ಲ, ಮೃಗ.
ನನಗೆ ಮನುಷ್ಯನ ಗ್ರಹಿಕೆ ಇಲ್ಲ.
ನಾನು ಜ್ಞಾನವನ್ನು ಕಲಿತುಕೊಂಡಿಲ್ಲ;
ಅಲ್ಲದೆ ಪರಿಶುದ್ಧ ದೇವರ ಅರಿವು ನನಗಿಲ್ಲ.
ಯಾರು ಸ್ವರ್ಗಕ್ಕೆ ಹೋಗಿ ಕೆಳಗಿಳಿದು ಬಂದಿದ್ದಾರೆ?
ಯಾರ ಕೈಗಳು ಗಾಳಿಯನ್ನು ಒಟ್ಟುಗೂಡಿಸಿವೆ?
ಯಾರು ತಮ್ಮ ವಸ್ತ್ರದಲ್ಲಿ ಸಾಗರಗಳನ್ನು ಮೂಟೆಕಟ್ಟಿಕೊಂಡಿದ್ದಾರೆ?
ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿದವರು ಯಾರು?
ಅವರ ಹೆಸರೇನು? ಅವರ ಮಗನ ಹೆಸರೇನು?
ಖಂಡಿತವಾಗಿಯೂ ನಿಮಗೆ ಗೊತ್ತಿರಬೇಕು!
 
 
“ದೇವರ ಪ್ರತಿಯೊಂದು ಮಾತು ದೋಷವಿಲ್ಲದ್ದು;
ದೇವರಲ್ಲಿ ಭರವಸವಿಡುವವನಿಗೆ ಅವರು ಗುರಾಣಿಯಾಗಿದ್ದಾರೆ.
ದೇವರ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ.
ಇಲ್ಲವಾದರೆ ದೇವರು ನಿನ್ನನ್ನು ಗದರಿಸಿ ನಿನ್ನನ್ನು ಸುಳ್ಳುಗಾರನೆಂದು ಸಾಬೀತುಪಡಿಸುವರು.
 
“ಯೆಹೋವ ದೇವರೇ, ನಾನು ನಿಮ್ಮನ್ನು ಎರಡು ವಿಷಯಗಳನ್ನು ಕೇಳುತ್ತೇನೆ.
ನಿರಾಕರಿಸಬೇಡಿ ನಾನು ಸಾಯುವ ಮೊದಲು ಅವೆರಡನ್ನು ಅನುಗ್ರಹಿಸಿರಿ.
ವಂಚನೆ ಸುಳ್ಳನ್ನು ನನ್ನಿಂದ ದೂರಮಾಡಿರಿ.
ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ನನಗೆ ಕೊಡಬೇಡಿರಿ.
ನನಗೆ ಅನುದಿನದ ಆಹಾರವನ್ನು ದಯಪಾಲಿಸಿರಿ.
ನಾನು ಐಶ್ವರ್ಯವಂತನಾದರೆ ನಿನ್ನನ್ನು ನಿರಾಕರಿಸಿ,
‘ಯೆಹೋವ ದೇವರು ಯಾರು?’ ಎಂದು ಹೇಳೇನು.
ನಾನು ಬಡವನಾದರೆ ಕಳ್ಳತನಮಾಡಿ
ನನ್ನ ದೇವರಾದ ನಿಮ್ಮ ಹೆಸರಿಗೆ ಅಪಕೀರ್ತಿ ತಂದೇನು.
 
10 “ಕೆಲಸಗಾರರ ವಿಷಯವಾಗಿ ಅವನ ಯಜಮಾನನಿಗೆ ದೂರು ಹೇಳಬೇಡ;
ಇದರಿಂದ ಆ ಕೆಲಸಗಾರ ನಿನ್ನನ್ನು ಶಪಿಸಾನು, ಆಗ ನೀನು ದೋಷಿಯಾಗುವೆ.
 
11 “ತಮ್ಮ ತಂದೆಯನ್ನು ಶಪಿಸಿ,
ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವವರು ಇದ್ದಾರೆ.
12 ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವವರು ಇದ್ದಾರೆ;
ಆದರೆ ಅವರು ತಮ್ಮ ಕೊಳೆಯನ್ನು ತೊಳೆದುಕೊಂಡಿರುವುದಿಲ್ಲ.
13 ಅವರ ಕಣ್ಣುಗಳು ಯಾವಾಗಲೂ ಅಹಂಕಾರದಿಂದ ಕೂಡಿರುತ್ತವೆ.
ಅವರ ದೃಷ್ಟಿ ಅಸಹ್ಯವಾಗಿದೆ.
14 ಖಡ್ಗಗಳಂತೆ ಹಲ್ಲುಗಳುಳ್ಳವರೂ
ಚೂರಿಗಳಂತೆ ದವಡೆಗಳುಳ್ಳವರೂ
ಬಡವರನ್ನು ಭೂಮಿಯಿಂದಲೂ
ದಿಕ್ಕಿಲ್ಲದವರನ್ನು ಮಾನವಕುಲದಿಂದಲೂ ಕಬಳಿಸುವವರೂ ಆಗಿದ್ದಾರೆ.
 
15 “ಜಿಗಣೆಗೆ, ‘ಕೊಡು! ಕೊಡು!’ ಎಂದು ಕೂಗುವ
ಇಬ್ಬರು ಹೆಣ್ಣುಮಕ್ಕಳುಂಟು.
 
“ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ,
ಹೌದು, ‘ಸಾಕು!’ ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ:
16 ಸಮಾಧಿ,
ಬಂಜೆಯಾದ ಗರ್ಭ,
ನೀರಿನಿಂದ ಎಂದೂ ತೃಪ್ತಿ ಹೊಂದದ ಭೂಮಿ,
‘ಸಾಕು!’ ಎಂದು ಹೇಳದಿರುವ ಬೆಂಕಿ.
 
17 “ತನ್ನ ತಂದೆಯನ್ನು ಹಾಸ್ಯಮಾಡಿ,
ತನ್ನ ತಾಯಿಯನ್ನು ಧಿಕ್ಕರಿಸುವ ಕಣ್ಣನ್ನು,
ಕಣಿವೆಯ ಕಾಗೆಗಳು ಕಿತ್ತು ಕಕ್ಕುವವು.
ರಣಹದ್ದುಗಳು ಅದನ್ನು ತಿಂದುಬಿಡುವವು.
 
18 “ನನಗೆ ಆಶ್ಚರ್ಯವಾದ ಮೂರು ಸಂಗತಿಗಳಿವೆ,
ಹೌದು, ನನಗೆ ಅರ್ಥವಾಗದಿರುವ ನಾಲ್ಕು ಸಂಗತಿಗಳಿವೆ:
19 ಆಕಾಶದಲ್ಲಿ ಹದ್ದಿನ ಮಾರ್ಗ,
ಬಂಡೆಯ ಮೇಲೆ ಸರ್ಪದ ಮಾರ್ಗ,
ಸಮುದ್ರ ನಡುವೆ ಹಡಗಿನ ಮಾರ್ಗ,
ಯುವಕ ಯುವತಿಯರ ಪ್ರೀತಿ ಮಾರ್ಗ.
 
20 “ಜಾರಸ್ತ್ರೀಯ ನಡತೆಯು ಹೀಗಿದೆ:
ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು
‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ.
 
21 “ಭೂಮಿಯು ಮೂರು ವಿಷಯಗಳಿಂದ ಕಳವಳಗೊಳ್ಳುತ್ತದೆ,
ನಾಲ್ವರನ್ನು ಅದು ತಾಳಲಾರದು:
22 ಅರಸನಾಗುವ ದಾಸನು,
ತಿನ್ನಲು ಸಾಕಷ್ಟು ಪಡೆಯುವ ಮೂರ್ಖನು,
23 ತಿರಸ್ಕಾರಕ್ಕೆ ಅರ್ಹಳಾದ ಮಹಿಳೆ, ಮದುವೆಯಾಗುವುದು.
ಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ.
 
24 “ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳವುಗಳಾದ
ನಾಲ್ಕು ಸಣ್ಣ ಪ್ರಾಣಿಗಳು ಇವೆ:
25 ಇರುವೆಗಳು ಬಲಹೀನ ಜೀವಿಗಳು,
ಆದರೂ ಅವು ಬೇಸಿಗೆಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ.
26 ಬೆಟ್ಟದ ಮೊಲಗಳು ಬಲಹೀನ ಪ್ರಾಣಿಗಳಾಗಿದ್ದರೂ
ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುತ್ತವೆ.
27 ಮಿಡತೆಗಳಿಗೆ ಅರಸನಿಲ್ಲ;
ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ.
28 ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ
ಅರಸನ ಅರಮನೆಗಳಲ್ಲಿ ಕಂಡುಬರುತ್ತವೆ.
 
29 “ಗಂಭೀರ ಗಮನದ ಮೂರು ಪ್ರಾಣಿಗಳಿವೆ,
ಹೌದು, ಗಂಭೀರ ಗತಿಯ ನಾಲ್ಕಿವೆ:
30 ಮೃಗಗಳಲ್ಲಿ ಬಲಿಷ್ಠವಾಗಿರುವ ಸಿಂಹವು, ಯಾವುದಕ್ಕೂ ಹಿಮ್ಮೆಟ್ಟದು.
31 ಕತ್ತೆತ್ತಿ ನಡೆಯುವ ಹುಂಜ,
ಹೋತವು,
ತನ್ನ ಸುತ್ತಲೂ ಸೈನಿಕರಿರುವ ಅರಸನು.
 
32 “ನೀನು ಹೆಮ್ಮೆಪಟ್ಟು ಮೂರ್ಖನಾಗಿ ನಡೆದಿದ್ದರೆ,
ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ,
ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೊ.
33 ಹಾಲನ್ನು ಕಡೆಯುವುದರಿಂದ ಬೆಣ್ಣೆ,
ಮೂಗನ್ನು ಹಿಂಡುವುದರಿಂದ ರಕ್ತ,
ಹಾಗೆಯೇ ಕೋಪವನ್ನೆಬ್ಬಿಸುವುದರಿಂದ ಜಗಳ.”
* 30:1 30:1 ದೈವ ಪ್ರೇರಿತ ಪ್ರಕಟನೆಗಳು ಇಥಿಯೇಲನಿಗೆ ಆಗೂರನ ಬುದ್ಧಿಮಾತುಗಳು