3
ಜ್ಞಾನದಿಂದ ಇನ್ನಷ್ಟು ಲಾಭಗಳು
ಮಗನೇ, ನನ್ನ ಉಪದೇಶವನ್ನು ಮರೆಯಬೇಡ;
ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
ಏಕೆಂದರೆ ಅವು ನಿನ್ನ ದಿನಗಳನ್ನು ಹೆಚ್ಚಿಸಿ ದೀರ್ಘಾಯುಷ್ಯವನ್ನು ನೀಡುವುದು,
ಸಮಾಧಾನವನ್ನೂ ಸಮೃದ್ಧಿಯನ್ನೂ ನಿನಗೆ ಕೊಡುವುದು.
 
ಪ್ರೀತಿ, ನಂಬಿಗಸ್ತಿಕೆಗಳು ನಿನ್ನನ್ನು ಬಿಡದಿರಲಿ;
ಅವು ನಿನ್ನ ಕೊರಳಿನ ಸುತ್ತಲೂ ಕಟ್ಟಿರಲಿ,
ನಿನ್ನ ಹೃದಯದ ಹಲಗೆಯ ಮೇಲೆ ಅವು ಬರೆದಿರಲಿ.
ಆಗ ದೇವರ ಮುಂದೆಯೂ ಮನುಷ್ಯರ ಮುಂದೆಯೂ ದಯೆಯನ್ನೂ,
ಒಳ್ಳೆಯ ಹೆಸರನ್ನೂ ನೀನು ಪಡೆದುಕೊಳ್ಳುವೆ.
 
ಪೂರ್ಣಹೃದಯದಿಂದ ಯೆಹೋವ ದೇವರಲ್ಲಿ ಭರವಸೆ ಇಡು
ನಿನ್ನ ಸ್ವಂತ ಬುದ್ಧಿಯ ಮೇಲೆಯೇ ಆಧಾರಗೊಳ್ಳಬೇಡ.
ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು.
ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು.
 
ನಿನ್ನ ದೃಷ್ಟಿಯಲ್ಲಿ ನೀನೇ ಜ್ಞಾನಿ ಎಂದು ಇರಬೇಡ;
ಯೆಹೋವ ದೇವರಿಗೆ ಭಯಪಟ್ಟು, ಕೆಟ್ಟದ್ದನ್ನು ತೊರೆದುಬಿಡು.
ನಿನ್ನ ದೇಹಕ್ಕೆ ಅದು ಆರೋಗ್ಯವನ್ನು ತರುವುದು;
ನಿನ್ನ ಎಲುಬುಗಳಿಗೆ ಅದು ಪೋಷಣೆಯನ್ನೂ ತರುವುದು.
 
ನಿನ್ನ ಆಸ್ತಿಯಿಂದಲೂ
ನಿನ್ನ ಎಲ್ಲಾ ಬೆಳೆಯ ಪ್ರಥಮ ಫಲದಿಂದಲೂ ಯೆಹೋವ ದೇವರನ್ನು ಸನ್ಮಾನಿಸು.
10 ಆಗ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು;
ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿರುವುದು.
 
11 ಮಗನೇ, ಯೆಹೋವ ದೇವರ ಶಿಕ್ಷೆಯನ್ನು ತಾತ್ಸಾರ ಮಾಡಬೇಡ;
ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
12 ಏಕೆಂದರೆ ತಂದೆಯು ತನ್ನ ಮುದ್ದುಮಗನನ್ನು ಶಿಕ್ಷಿಸುವಂತೆ,
ಯೆಹೋವ ದೇವರು ಯಾರನ್ನು ಪ್ರೀತಿಸುತ್ತಾರೋ, ಅವರನ್ನು ಶಿಸ್ತುಗೊಳಿಸುವರು.
 
13 ಜ್ಞಾನವನ್ನು ಕಂಡುಕೊಳ್ಳುವವನು ಧನ್ಯನು,
ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು.
14 ಏಕೆಂದರೆ ಜ್ಞಾನವು ಬೆಳ್ಳಿಗಿಂತ ಹೆಚ್ಚು ಲಾಭವೂ;
ಬಂಗಾರಕ್ಕಿಂತ ಹೆಚ್ಚು ಆದಾಯವನ್ನು ಕೊಡುವುದು.
15 ಜ್ಞಾನವು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯ;
ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವುದಿಲ್ಲ.
16 ಜ್ಞಾನದ ಬಲಗೈಯಲ್ಲಿ ದೀರ್ಘಾಯುಷ್ಯವಿದೆ;
ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ.
17 ಜ್ಞಾನದ ಮಾರ್ಗಗಳು ಸಂತೋಷಕರ;
ಅದರ ದಾರಿಗಳೆಲ್ಲಾ ಶಾಂತಿಯ ದಾರಿಗಳೇ.
18 ಜ್ಞಾನವನ್ನು ಹಿಡಿದುಕೊಳ್ಳುವವರಿಗೆ ಜ್ಞಾನವು ಜೀವವೃಕ್ಷವಾಗಿದೆ;
ಅದನ್ನು ಭದ್ರವಾಗಿ ಇಟ್ಟುಕೊಳ್ಳುವವರು ಧನ್ಯರು.
 
19 ಯೆಹೋವ ದೇವರು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದರು,
ತಮ್ಮ ತಿಳುವಳಿಕೆಯ ಮೂಲಕ ಅವರು ಆಕಾಶಗಳನ್ನು ಸ್ಥಿರಪಡಿಸಿದರು.
20 ದೇವರು ತಮ್ಮ ಅರಿವಿನಿಂದಲೇ ಸೆಲೆಗಳು ಒಡೆದು,
ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ.
 
21 ಮಗನೇ, ಜ್ಞಾನವನ್ನೂ ತಿಳುವಳಿಕೆಯನ್ನೂ ಕಾಪಾಡಿಕೋ,
ನಿನ್ನ ಕಣ್ಣುಗಳಿಂದ ಅವು ತಪ್ಪಿಹೋಗದೆ ಇರಲಿ.
22 ಅವು ನಿನಗೆ ಜೀವವಾಗಿರಲಿ.
ನಿನ್ನ ಕೊರಳಿಗೆ ಆಭರಣವೂ ಆಗಿರುವುವು.
23 ಆಗ ನಿನ್ನ ಮಾರ್ಗದಲ್ಲಿ ಸುರಕ್ಷಿತವಾಗಿರುವೆ;
ನೀನು ಎಡವದೆ ನಡೆಯುವೆ.
24 ನೀನು ಮಲಗುವಾಗ ನಿನಗೆ ಹೆದರಿಕೆ ಇರುವುದಿಲ್ಲ;
ನೀನು ಮಲಗಿದಾಗ ನಿದ್ರೆಯು ಸುಖವಾಗಿರುವುದು.
25 ಆಕಸ್ಮಿಕ ವಿಪತ್ತಿಗೆ ನೀನು ಅಂಜುವುದಿಲ್ಲ;
ದುಷ್ಟರ ಮೇಲೆ ಬರುವ ನಾಶನಕ್ಕೂ ನೀನು ಭಯಪಡದಿರುವೆ.
26 ಏಕೆಂದರೆ ಯೆಹೋವ ದೇವರೇ ನಿನಗೆ ಭರವಸೆ ಆಗಿದ್ದಾರೆ,
ನಿನ್ನ ಪಾದವು ಉರುಲಿಗೆ ಸಿಕ್ಕದಂತೆ ಅವರು ಕಾಪಾಡುವರು.
 
27 ನಿನಗೆ ಶಕ್ತಿಯಿರುವಾಗಲೇ ಇತರರಿಗೆ ಉಪಕಾರಮಾಡು
ಒಳಿತು ಮಾಡುವುದನ್ನು ನಿನ್ನಲ್ಲಿಯೇ ಇಟ್ಟುಕೊಳ್ಳಬೇಡ.
28 ಕೊಡತಕ್ಕದ್ದು ಈಗಾಗಲೇ ನಿನ್ನಲ್ಲಿರುವಾಗ,
“ಹೋಗಿ ಬಾ, ನಾಳೆ ನಿನಗೆ ಕೊಡುತ್ತೇನೆ,”
ಎಂದು ನಿನ್ನ ನೆರೆಯವನಿಗೆ ಹೇಳಬೇಡ.
29 ನಿನ್ನ ನೆರೆಯವನು ಭರವಸೆಯಿಂದ ನಿನ್ನ ಪಕ್ಕದಲ್ಲಿ ವಾಸಮಾಡುತ್ತಿರುವಾಗ,
ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸಬೇಡ.
30 ಒಬ್ಬನು ನಿನಗೆ ಯಾವ ತೊಂದರೆ ಮಾಡದಿದ್ದರೆ,
ಅವನೊಂದಿಗೆ ಕಾರಣವಿಲ್ಲದೆ ದೂರು ನುಡಿಯಬೇಡ.
 
31 ಬಲಾತ್ಕಾರಿಯ ವಿಷಯದಲ್ಲಿ ನೀನು ಹೊಟ್ಟೆಕಿಚ್ಚುಪಡಬೇಡ;
ಅವನ ಮಾರ್ಗಗಳಲ್ಲಿ ಯಾವುದನ್ನೂ ನೀನು ಆರಿಸಿಕೊಳ್ಳಬೇಡ.
 
32 ಏಕೆಂದರೆ ವಕ್ರಬುದ್ಧಿ ಯೆಹೋವ ದೇವರಿಗೆ ಅಸಹ್ಯ;
ಆದರೆ ದೇವರ ನಂಬಿಗಸ್ತಿಕೆ ನೀತಿವಂತರೊಂದಿಗೆ ಇದೆ.
33 ದುಷ್ಟರ ಮನೆಯ ಮೇಲೆ ದೈವಶಾಪವಿದೆ.
ಆದರೆ ನೀತಿವಂತರ ನಿವಾಸದ ಮೇಲೆ ದೈವಾಶೀರ್ವಾದವಿರುವುದು.
34 ದೇವರು ಗರ್ವಿಷ್ಠ ಪರಿಹಾಸ್ಯಗಾರರನ್ನು ಪರಿಹಾಸ್ಯ ಮಾಡುತ್ತಾರೆ;
ದೀನರಿಗಾದರೋ ದೇವರು ಕೃಪೆಯನ್ನು ಕೊಡುತ್ತಾರೆ.
35 ಜ್ಞಾನಿಗಳು ಸನ್ಮಾನಕ್ಕೆ ಬಾಧ್ಯನಾಗುವರು;
ಆದರೆ ಜ್ಞಾನಹೀನರ ಪ್ರತಿಫಲವು ಅವಮಾನವೆ.