*
ಕೀರ್ತನೆ 37
ದಾವೀದನ ಕೀರ್ತನೆ.
ಕೆಟ್ಟವರನ್ನು ನೋಡಿ ಕೋಪಿಸಿಕೊಳ್ಳಬೇಡ.
ಇಲ್ಲವೆ ಅಕ್ರಮ ಮಾಡುವವರ ಬಗ್ಗೆ ಹೊಟ್ಟೆಕಿಚ್ಚುಪಡಬೇಡ.
ಏಕೆಂದರೆ, ಅವರು ಹುಲ್ಲಿನ ಹಾಗೆ ಬೇಗ ಒಣಗಿ ಹೋಗುವರು.
ಹಸಿರಾದ ಸೊಪ್ಪಿನ ಹಾಗೆ ಬಾಡಿಹೋಗುವರು.
 
ಯೆಹೋವ ದೇವರಲ್ಲಿ ಭರವಸೆ ಇಟ್ಟು ಒಳ್ಳೆಯದನ್ನು ಮಾಡು;
ಆಗ ದೇಶದಲ್ಲಿ ವಾಸಮಾಡಿ ಹಸಿರುಗಾವಲನ್ನು ಅನುಭವಿಸುವಿ.
ಯೆಹೋವ ದೇವರಲ್ಲಿ ಆನಂದವಾಗಿರು;
ಆಗ ಅವರು ನಿನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವರು.
 
ನಿನ್ನ ಮಾರ್ಗವನ್ನು ಯೆಹೋವ ದೇವರಿಗೆ ಒಪ್ಪಿಸು;
ಅವರಲ್ಲಿ ಭರವಸೆ ಇಡು; ಅವರು ನಿನಗೆ ಇದನ್ನು ಮಾಡುವರು:
ಅವರು ನಿನ್ನ ನೀತಿಯನ್ನು ಉದಯದ ಬೆಳಕಿನ ಹಾಗೆ ಮಾಡುವರು,
ಅವರು ನಿನ್ನ ನ್ಯಾಯವನ್ನು ಮಧ್ಯಾಹ್ನದ ಸೂರ್ಯನ ಹಾಗೆ ಹೊಳೆಯುವಂತೆ ಮಾಡುವರು.
 
ಯೆಹೋವ ದೇವರ ಮುಂದೆ ಶಾಂತನಾಗಿರು;
ಮೌನವಾಗಿದ್ದು ಅವರಿಗಾಗಿ ಎದುರು ನೋಡು;
ತಮ್ಮ ಮಾರ್ಗದಲ್ಲಿ ಸಫಲವಾಗುವವರನ್ನು ಕಂಡು ಸಿಡುಕಬೇಡ.
ಕುಯುಕ್ತಿಗಳನ್ನು ನಡೆಸುವ ಮನುಷ್ಯರನ್ನು ಕಂಡು ಕೋಪ ಮಾಡಿಕೊಳ್ಳಬೇಡ.
 
ಕೋಪವನ್ನು ಅಡಗಿಸು ಮತ್ತು ರೋಷವನ್ನು ಬಿಡು.
ಸಿಡುಕಬೇಡ, ಅದು ಕೆಟ್ಟತನಕ್ಕೆ ನಡೆಸುತ್ತದೆ.
ಏಕೆಂದರೆ, ದುರ್ಮಾರ್ಗಿಗಳು ನಾಶವಾಗುವರು;
ಯೆಹೋವ ದೇವರನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು.
 
10 ಇನ್ನು ಸ್ವಲ್ಪ ಸಮಯದಲ್ಲಿ ದುಷ್ಟನು ಕಾಣದೆ ಹೋಗುವನು.
ಅವನನ್ನು ಹುಡುಕಿದರೂ ಸಿಕ್ಕುವುದೇ ಇಲ್ಲ.
11 ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು.
ದೀನರು ಬಹಳ ಸಮಾಧಾನವನ್ನೂ ಸಮೃದ್ಧಿಯನ್ನು ಅನುಭವಿಸುವರು.
 
12 ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ,
ಆದರೆ ಅವನನ್ನು ಕಂಡು ಹಲ್ಲು ಕಡಿಯುತ್ತಾನೆ.
13 ದುಷ್ಟನ ದಿವಸ ಬರುತ್ತದೆಂದು ತಿಳಿದು
ಯೆಹೋವ ದೇವರು ನಗುತ್ತಾರೆ.
 
14 ದುಷ್ಟರು ಬಡವನನ್ನೂ ದೀನನನ್ನೂ ಬೀಳಿಸಬೇಕೆಂದು
ಖಡ್ಗವನ್ನು ಹಿರಿದಿದ್ದಾರೆ,
ಸನ್ಮಾರ್ಗದವರನ್ನು ಕೊಲ್ಲುವುದಕ್ಕೂ
ತಮ್ಮ ಬಿಲ್ಲುಗಳನ್ನು ಬಗ್ಗಿಸಿದ್ದಾರೆ.
15 ಆದರೆ ಅವರ ಖಡ್ಗ ಅವರ ಹೃದಯದಲ್ಲಿ ಇರಿದು ಬಿಡುವುದು;
ಅವರ ಬಿಲ್ಲುಗಳು ಮುರಿದುಹೋಗುವವು.
 
16 ದುಷ್ಟರ ಐಶ್ವರ್ಯಕ್ಕಿಂತ
ನೀತಿವಂತರ ಅಲ್ಪವೇ ಲೇಸು.
17 ಏಕೆಂದರೆ ದುಷ್ಟರ ತೋಳುಗಳು ಮುರಿದುಹೋಗುವವು,
ಆದರೆ ನೀತಿವಂತರನ್ನು ಯೆಹೋವ ದೇವರು ಉದ್ಧಾರ ಮಾಡುವರು.
 
18 ನಿರ್ದೋಷಿಗಳು ತಮ್ಮ ದಿವಸಗಳನ್ನು ಯೆಹೋವ ದೇವರ ಪರಾಮರಿಕೆಯಲ್ಲಿ ಕಳೆಯುವರು.
ನಿರಪರಾಧಿಯ ಬಾಧ್ಯತೆಯು ಯುಗಯುಗಕ್ಕೂ ಇರುವುದು.
19 ಆಪತ್ಕಾಲದಲ್ಲಿ ಅವರು ಕುಂದುವುದಿಲ್ಲ;
ಕ್ಷಾಮದ ದಿವಸಗಳಲ್ಲಿ ಸಮೃದ್ಧಿಯನ್ನು ಅನುಭವಿಸುವರು.
 
20 ಆದರೆ ದುಷ್ಟರು ನಾಶವಾಗುವರು;
ಯೆಹೋವ ದೇವರ ಶತ್ರುಗಳು ಗದ್ದೆಯ ಹೂಗಳಂತೆ ಬಾಡಿಹೋಗುವರು;
ಹೊಗೆಯಂತೆ ಮಾಯವಾಗುವರು.
 
21 ದುಷ್ಟನು ಸಾಲ ಮಾಡಿ ಹಿಂದಿರುಗಿ ಕೊಡದೆ ಹೋಗುವನು.
ಆದರೆ ನೀತಿವಂತನು ಧಾರಾಳವಾಗಿ ಕೊಡುತ್ತಾನೆ.
22 ಯೆಹೋವ ದೇವರು ಆಶೀರ್ವದಿಸುವವರು,
ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವರು;
ಆದರೆ ದೇವರ ಶಾಪಕ್ಕೆ ಗುರಿಯಾಗುವವರು ನಾಶವಾಗುವರು.
 
23 ಯೆಹೋವ ದೇವರಲ್ಲಿ ಯಾರು ಹರ್ಷಿಸುತ್ತಾರೋ
ಅವರ ಹೆಜ್ಜೆಗಳನ್ನು ಸ್ಥಿರಪಡಿಸುವರು.
24 ಅವನು ಎಡವಿದರೂ ಬಿದ್ದುಹೋಗುವುದಿಲ್ಲ.
ಏಕೆಂದರೆ ಯೆಹೋವ ದೇವರು ತಾವೇ ತಮ್ಮ ಕೈಯಿಂದ ಅವನನ್ನು ಎತ್ತಿಹಿಡಿಯುವರು.
 
25 ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ;
ಆದರೆ ನೀತಿವಂತನು ಕೈಬಿಟ್ಟಿರುವುದನ್ನಾಗಲಿ
ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆ ಬೇಡುವುದನ್ನಾಗಲಿ ಎಂದೂ ನಾನು ನೋಡಲಿಲ್ಲ.
26 ಅವರು ಯಾವಾಗಲೂ ಧಾರಾಳವಾಗಿ ಸಾಲ ಕೊಡುತ್ತಾರೆ;
ನೀತಿವಂತನ ಸಂತತಿಯವರು ಆಶೀರ್ವಾದ ಹೊಂದುವರು.
 
27 ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು,
ಆಗ ಯುಗಯುಗಕ್ಕೂ ನಾಡಿನಲ್ಲಿ ವಾಸಮಾಡುವೆ.
28 ಏಕೆಂದರೆ ಯೆಹೋವ ದೇವರು ನ್ಯಾಯವನ್ನು ಪ್ರೀತಿಸುತ್ತಾರೆ;
ತಮ್ಮ ನಂಬಿಗಸ್ತ ಜನರನ್ನು ತೊರೆದುಬಿಡರು.
 
ನೀತಿವಂತರು ಸದಾಕಾಲಕವೂ ಸುರಕ್ಷಿತರಾಗಿರುವರು;
ಆದರೆ ದುಷ್ಟರ ಸಂತತಿಯು ಅಳಿದುಹೋಗುವುದು.
29 ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು
ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.
 
30 ನೀತಿವಂತನ ಬಾಯಿ ಜ್ಞಾನವನ್ನು ನುಡಿಯುವುದು;
ಅವನ ನಾಲಿಗೆ ನ್ಯಾಯವನ್ನು ಮಾತನಾಡುವುದು.
31 ಅವನ ದೇವರ ನಿಯಮವೂ ಅವನ ಹೃದಯದಲ್ಲಿ ಇದೆ;
ಅವನ ಹೆಜ್ಜೆ ಕದಲುವುದಿಲ್ಲ.
 
32 ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ;
ಅವನನ್ನು ಕೊಲ್ಲಲು ಹುಡುಕುತ್ತಾನೆ.
33 ಆದರೆ ಯೆಹೋವ ದೇವರು ಅವನನ್ನು ದುಷ್ಟನ ಕೈಯಲ್ಲಿ ಬಿಡುವುದಿಲ್ಲ;
ನ್ಯಾಯ ವಿಚಾರಣೆಯಲ್ಲಿ ನೀತಿವಂತನನ್ನು ಅಪರಾಧಿಯೆಂದು ತೀರ್ಪು ಕೊಡುವುದಿಲ್ಲ.
 
34 ಯೆಹೋವ ದೇವರನ್ನು ನಿರೀಕ್ಷಿಸು;
ಅವರ ಮಾರ್ಗದಲ್ಲಿ ನಡೆ;
ಆಗ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಂತೆ ನಿನ್ನನ್ನು ಅವರು ಉನ್ನತಕ್ಕೆ ತರುವರು;
ದುಷ್ಟರ ವಿನಾಶವನ್ನು ನೀವು ಕಾಣುವಿರಿ.
 
35 ದುಷ್ಟರು ದೊಡ್ಡ ಅಧಿಕಾರದಲ್ಲಿರುವುದನ್ನು ನಾನು ಕಂಡೆನು;
ಅವರು ಹಸಿರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದರು.
36 ಆದರೆ ಅವರು ಅಳಿದೇ ಹೋದರು;
ಅವರನ್ನು ಹುಡುಕಿದೆನು; ಆದರೆ ಅವರು ಸಿಕ್ಕಲಿಲ್ಲ.
 
37 ನಿರ್ದೋಷಿಯನ್ನು ಗಮನಿಸು;
ಯಥಾರ್ಥನನ್ನು ನೋಡು;
ಸಮಾಧಾನ ಹುಡುಕುವವರಿಗೆ ಒಳ್ಳೆಯ ಭವಿಷ್ಯವಿದೆ.
38 ಆದರೆ ದ್ರೋಹಿಗಳೆಲ್ಲರೂ ನಾಶವಾಗುವರು;
ದುಷ್ಟರಿಗೆ ಒಳ್ಳೆಯ ಭವಿಷ್ಯವಿಲ್ಲ.
 
39 ನೀತಿವಂತರ ರಕ್ಷಣೆಯು ಯೆಹೋವ ದೇವರಿಂದಲೇ;
ಇಕ್ಕಟ್ಟಿನ ಕಾಲದಲ್ಲಿ ದೇವರೇ ಅವರ ಕೋಟೆ.
40 ಯೆಹೋವ ದೇವರು ಅವರಿಗೆ ಸಹಾಯಮಾಡಿ ಅವರನ್ನು ಬಿಡಿಸುವರು.
ದುಷ್ಟರಿಂದ ಅವರನ್ನು ತಪ್ಪಿಸಿ ಬಿಡಿಸುವರು.
ಏಕೆಂದರೆ ಅವರು ದೇವರಲ್ಲಿ ಆಶ್ರಯ ಪಡೆದಿದ್ದಾರೆ.
* ಕೀರ್ತನೆ 37: 37:0 ಹೀಬ್ರೂ ಅಕ್ಷರ ಕ್ರಮಾನುಸಾರವಾದ ಪ್ರಾರ್ಥನೆ.