ಕೀರ್ತನೆ 53
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು. ಮಸ್ಕೀಲ್ ರಾಗದಲ್ಲಿ ರಚಿಸಿದ ದಾವೀದನ ಕೀರ್ತನೆ.
“ದೇವರು ಇಲ್ಲಾ,” ಎಂದು
ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ.
ಅವರು ಕೆಟ್ಟು ಹೋದವರು ಅವರ ಮಾರ್ಗಗಳು ಅಸಹ್ಯಕರ.
ಅವರಲ್ಲಿ ಒಳ್ಳೆಯದನ್ನು ಮಾಡುವವರು ಒಬ್ಬರೂ ಇಲ್ಲ.
 
ದೇವರನ್ನು ಹುಡುಕುವ
ಜ್ಞಾನಿಗಳು ಇದ್ದಾರೋ
ಎಂದು ನೋಡುವುದಕ್ಕೆ
ದೇವರು ಸ್ವರ್ಗದಿಂದ ಮನುಷ್ಯರ ಮೇಲೆ ದೃಷ್ಟಿಸಿದರು.
ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ,
ಒಬ್ಬರಾದರೂ ಇಲ್ಲ.
ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದರು.
 
ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ?
 
ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ?
ಅವರು ದೇವರನ್ನು ಸ್ಮರಿಸುವುದೇ ಇಲ್ಲ.
ಭಯವಿಲ್ಲದಿರುವಲ್ಲಿ ಅವರು ಭಯಭ್ರಾಂತರಾದರು;
ಏಕೆಂದರೆ ನಿಮಗೆ ವಿರೋಧವಾಗಿ ದಂಡು ಇಳಿಸುವವರನ್ನು
ದೇವರು ಚದರಿಸಿಬಿಟ್ಟಿದ್ದಾರೆ. ನೀವು ಅವರನ್ನು ನಾಚಿಕೆಪಡಿಸಿದ್ದೀರಿ.
ಏಕೆಂದರೆ ದೇವರು ಅವರನ್ನು ತಿರಸ್ಕರಿಸಿದ್ದಾರೆ.
 
ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು!
ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ
ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.