11
ಎರಡು ಸಾಕ್ಷಿಗಳು
ದಂಡದಂತಿದ್ದ ಒಂದು ಅಳತೆ ಕೋಲು ನನಗೆ ಕೊಡಲಾಯಿತು. ನನಗೆ ಹೀಗೆ ಹೇಳಲಾಯಿತು: “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆಮಾಡಿ, ಆಲಯದಲ್ಲಿ ಆರಾಧನೆ ಮಾಡುವವರನ್ನು ಎಣಿಸು. ಆಲಯಕ್ಕೆ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು. ಏಕೆಂದರೆ ಅದು ಯೆಹೂದ್ಯರಲ್ಲದವರಿಗಾಗಿ ಬಿಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು. ನನ್ನ ಇಬ್ಬರು ಸಾಕ್ಷಿಗಳಿಗೆ ಗೋಣಿತಟ್ಟುಗಳನ್ನು ಹೊದ್ದುಕೊಂಡು, ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವಂತೆ ಮಾಡುವೆನು,” ಇವರು, “ಎಣ್ಣೆಯ ಮರಗಳೂ ಭೂಲೋಕದ ಒಡೆಯ ಆಗಿರುವವರ ಮುಂದೆ ನಿಂತಿರುವ ಎರಡು ದೀಪಸ್ತಂಭಗಳೂ ಆಗಿದ್ದಾರೆ.”* ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಇವರ ಬಾಯೊಳಗಿಂದ ಬೆಂಕಿ ಹೊರಟು, ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಅವನಿಗೂ ಅದೇ ರೀತಿಯಾಗಿ ಕೊಲೆಯಾಗಬೇಕು. ತಾವು ಪ್ರವಾದಿಸುತ್ತಿರುವ ದಿನಗಳಲ್ಲಿ, ಮಳೆ ಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಇರುವುದು. ಇದಲ್ಲದೆ ಇವರಿಗೆ ಬಯಸಿದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಬಾಧಿಸುವುದಕ್ಕೂ ಅಧಿಕಾರ ಇರುತ್ತದೆ.
ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ, ಪಾತಾಳದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ, ಇವರನ್ನು ಜಯಿಸಿ ಕೊಲ್ಲುವುದು. ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಗಳು ಸಾಂಕೇತಿಕವಾಗಿ ಸೊದೋಮ್ ಹಾಗೂ ಈಜಿಪ್ಟ್ ಎಂದೂ ಹೆಸರುಗಳಿರುವುದು. ಇವರ ಒಡೆಯ ಆಗಿರುವವರನ್ನು ಸಹ ಅಲ್ಲಿಯೇ ಶಿಲುಬೆಗೆ ಹಾಕಲಾಗಿತ್ತು. ಆಗ ಸಕಲ ಪ್ರಜೆ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು, ಇವರ ಶವಗಳನ್ನು ಸಮಾಧಿಯಲ್ಲಿಡಲು ಅನುಮತಿಸದೆ, ಮೂರುವರೆ ದಿನಗಳವರೆಗೂ ನೋಡುತ್ತಾ ಇರುವರು. 10 ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ್ದರಿಂದ, ಇದರ ವಿಷಯವಾಗಿ ಭೂನಿವಾಸಿಗಳು ಸಂತೋಷಿಸಿ, ಹರ್ಷಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.
11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮವು ಬಂದು, ಆ ಶವಗಳಲ್ಲಿ ಪ್ರವೇಶಿಸಲು, ಅವು ಕಾಲೂರಿ ನಿಂತವು. ಅವರನ್ನು ಕಂಡವರಿಗೆ ಮಹಾ ಭಯವುಂಟಾಯಿತು. 12 ಆಗ ಅವರಿಗೆ, “ಇಲ್ಲಿ ಮೇಲಕ್ಕೆ ಬನ್ನಿರಿ,” ಎಂದು ಮಹಾಧ್ವನಿಯು ಕೇಳಿಸಿತು. ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.
13 ಅದೇ ಗಳಿಗೆಯಲ್ಲಿ, ಮಹಾ ಭೂಕಂಪ ಉಂಟಾಗಿ ಆ ಪಟ್ಟಣದ ಹತ್ತರಲ್ಲೊಂದು ಭಾಗವು ಬಿದ್ದುಹೋಯಿತು. ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಸತ್ತುಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು.
14 ಎರಡನೆಯ ವಿಪತ್ತು ಕಳೆದುಹೋಯಿತು. ಮೂರನೆಯ ವಿಪತ್ತು ಬೇಗನೆ ಬರಲಿದೆ.
ಏಳನೆಯ ತುತೂರಿ
15 ಏಳನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾ ಧ್ವನಿಗಳುಂಟಾಗಿ, ಹೀಗೆ ಹೇಳಿದವು:
“ಲೋಕದ ರಾಜ್ಯವು
ನಮ್ಮ ದೇವರ ಮತ್ತು ಅವರಿಗೆ ಸೇರಿದ ಕ್ರಿಸ್ತ ಯೇಸುವಿನ ರಾಜ್ಯವಾಯಿತು,
ಈ ಕ್ರಿಸ್ತ ಯೇಸುವೇ ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವರು.”
16 ತರುವಾಯ ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ದೇವರಿಗೆ ಅಡ್ಡಬಿದ್ದು, 17 ಹೀಗೆ ಹೇಳಿದರು:
“ಕರ್ತ ಆಗಿರುವ, ಸರ್ವಶಕ್ತರಾದ ದೇವರೇ,
ಮೊದಲು ಇದ್ದು ಈಗಲೂ ಇರುವವರೂ,
ನೀವು ನಿಮ್ಮ ಮಹಾ ಅಧಿಕಾರವನ್ನು
ಪಡೆದು ಆಳಿದ್ದರಿಂದ ನಿಮಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
18 ರಾಷ್ಟ್ರಗಳು ಕೋಪಗೊಂಡವು,
ನಿಮ್ಮ ರೋಷವು ಈಗ ಬಂದಿದೆ.
ಸತ್ತವರು ತೀರ್ಪು ಹೊಂದುವ ಸಮಯ ಬಂದಿದೆ.
ನೀವು ನಿಮ್ಮ ಸೇವಕರಾದ ಪ್ರವಾದಿಗಳಿಗೂ ದೇವಜನರಿಗೂ
ನಿಮ್ಮ ನಾಮಕ್ಕೆ ಭಯಪಡುವ
ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲವನ್ನು ಕೊಟ್ಟು,
ಲೋಕ ನಾಶಕರನ್ನು ದಂಡಿಸುವಿರಿ.”
19 ಆಗ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ ಮಿಂಚುಗಳೂ ಸಪ್ಪಳಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಉಂಟಾದವು.
* 11:4 11:4 ನೋಡಿರಿ ಜೆಕರ್ಯ 4:3,11,14. 11:11 11:11 ಅಥವಾ ಜೀವಾತ್ಮವು (ನೋಡಿರಿ ಯೆಹೆ 37:5,14)