6
ಮಂಜೂಷವು ಇಸ್ರಾಯೇಲಿಗೆ ಹಿಂದಿರುಗಿ ಬಂದದ್ದು
ಯೆಹೋವ ದೇವರ ಮಂಜೂಷವು ಫಿಲಿಷ್ಟಿಯರ ಸೀಮೆಯಲ್ಲಿ ಏಳು ತಿಂಗಳು ಇದ್ದ ತರುವಾಯ ಫಿಲಿಷ್ಟಿಯರು ಯಾಜಕರನ್ನೂ ಕಣಿಹೇಳುವವರನ್ನೂ ಕರೆದು, “ಯೆಹೋವ ದೇವರ ಮಂಜೂಷವನ್ನು ನಾವೇನು ಮಾಡಬೇಕು? ನಾವು ಅದನ್ನು ಹೇಗೆ ಅದರ ಸ್ಥಳಕ್ಕೆ ಕಳುಹಿಸುವುದು ನಮಗೆ ತಿಳಿಸಿರಿ,” ಎಂದರು.
ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವನ್ನು ನೀವು ಕಳುಹಿಸಬೇಕಾದರೆ ಅದನ್ನು ಬರಿದಾಗಿ ಕಳುಹಿಸದೆ, ಅದರ ಸಂಗಡ ನಿಶ್ಚಯವಾಗಿ ದೋಷಪರಿಹಾರ ಕಾಣಿಕೆಯನ್ನು ಕಳುಹಿಸಿರಿ, ಆಗ ನೀವು ಸ್ವಸ್ಥರಾಗುವಿರಿ. ಅವರ ಕೈ ನಿಮ್ಮನ್ನು ಬಿಟ್ಟುಹೋಗದೆ ಇರುವ ಕಾರಣ ನಿಮಗೆ ತಿಳಿಯುವುದು,” ಎಂದರು.
ಆಗ ಅವರು, “ದೋಷಪರಿಹಾರ ಕಾಣಿಕೆಗಾಗಿ ನಾವು ಅದರ ಸಂಗಡ ಕಳುಹಿಸತಕ್ಕದ್ದೇನು?” ಎಂದರು.
ಅದಕ್ಕವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧ ವ್ಯಾಧಿಯಿರುವುದರಿಂದ ಫಿಲಿಷ್ಟಿಯರ ಅಧಿಪತಿಗಳ ಸಂಖ್ಯೆಗೆ ಸರಿಯಾಗಿ ಒಬ್ಬೊಬ್ಬರಿಗೆ ಬಂಗಾರದ ಐದು ಗಡ್ಡೆಗಳನ್ನು ಮತ್ತು ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ. ಏಕೆಂದರೆ ನಿಮ್ಮೆಲ್ಲರ ನಾಶಕ್ಕೆ ಕಾರಣವಾದ ಈ ಗಡ್ಡೆಗಳ ಹಾಗು ಇಲಿಗಳ ಸ್ವರೂಪಗಳನ್ನು ನೀವು ಮಾಡಿ ಇಸ್ರಾಯೇಲ್ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಅವರು ನಿಮ್ಮ ಮೇಲೆಯೂ, ನಿಮ್ಮ ದೇವರುಗಳ ಮೇಲೆಯೂ, ನಿಮ್ಮ ಭೂಮಿಯ ಮೇಲೆಯೂ ಇರುವ ತಮ್ಮ ಕೈಯನ್ನು ತೆಗೆದು ಹಗುರಮಾಡುವರು. ಈಜಿಪ್ಟಿನವರೂ, ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ, ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವುದೇನು? ದೇವರು ಅವರ ಮಧ್ಯದಲ್ಲಿ ಆಶ್ಚರ್ಯಕರವಾದ ಕ್ರಿಯೆಗಳನ್ನು ನಡಿಸಿದಾಗ, ಅವರು ಇಸ್ರಾಯೇಲರನ್ನು ಅವರು ಹೋಗುವಹಾಗೆ ಕಳುಹಿಸಲಿಲ್ಲವೋ?
“ಆದರೆ ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿ, ನೊಗವನ್ನು ಹಾಕದೆ ಇರುವ ಹಾಲು ಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು, ಅವುಗಳನ್ನು ಬಂಡಿಗೆ ಕಟ್ಟಿ, ಅವುಗಳ ಕರುಗಳನ್ನು ಅವುಗಳ ಹಿಂದೆ ಹೋಗದ ಹಾಗೆ ಮನೆಗೆ ತೆಗೆದುಕೊಂಡು ಬಂದು, ಯೆಹೋವ ದೇವರ ಮಂಜೂಷವನ್ನು ಬಂಡಿಯ ಮೇಲೆ ಇಟ್ಟು, ನೀವು ಕಳುಹಿಸಿಕೊಡುವ ನಿಮ್ಮ ದೋಷಪರಿಹಾರ ಕಾಣಿಕೆಯ ಬಂಗಾರದ ವಸ್ತುಗಳನ್ನು ಅದರ ಪಕ್ಕದಲ್ಲಿ ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿ, ಅದು ಹೋಗುವಹಾಗೆ ಕಳುಹಿಸಿರಿ. ಆಗ ನೋಡಿರಿ, ಅದು ತನ್ನ ಮೇರೆಯಾದ ಬೇತ್ ಷೆಮೆಷ್ ಎಂಬ ಮಾರ್ಗವನ್ನು ಹಿಡಿದು ಹೋದರೆ, ಯೆಹೋವ ದೇವರು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾರೆ, ಇಲ್ಲದೆ ಹೋದರೆ ಅವರ ಹಸ್ತವು ನಮ್ಮನ್ನು ಮುಟ್ಟಲಿಲ್ಲ, ಅದು ತಾನಾಗಿಯೇ ನಮಗೆ ಆಯಿತೆಂದು ತಿಳಿದುಕೊಳ್ಳಿರಿ,” ಎಂದರು.
10 ಅವರು ಆ ಪ್ರಕಾರವೇ ಎರಡು ಹಾಲು ಕರೆಯುವ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು 11 ಯೆಹೋವ ದೇವರ ಮಂಜೂಷವನ್ನೂ, ಬಂಗಾರದ ಇಲಿಗಳನ್ನೂ, ತಮ್ಮ ಗಡ್ಡೆರೋಗದ ರೂಪಗಳನ್ನೂ ಇಟ್ಟಿರುವ ಚಿಕ್ಕ ಪೆಟ್ಟಿಗೆಯನ್ನೂ ಆ ಬಂಡಿಯ ಮೇಲಿಟ್ಟರು. 12 ಆಗ ಹಸುಗಳು ಕೂಗುತ್ತಾ ಬೇತ್ ಷೆಮೆಷ್ ಕಡೆಗೆ ಹೋಗುವ ಮಾರ್ಗವನ್ನು ಹಿಡಿದು, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ ಹೆದ್ದಾರಿಯಲ್ಲಿ ಹೋದವು. ಫಿಲಿಷ್ಟಿಯರ ಅಧಿಪತಿಗಳು ಬೇತ್ ಷೆಮೆಷ್ ಊರಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.
13 ಬೇತ್ ಷೆಮೆಷ್ ಊರಿನವರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು, ಅದನ್ನು ಕಂಡದ್ದಕ್ಕೆ ಸಂತೋಷಪಟ್ಟರು. 14 ಆ ಬಂಡಿಯು ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಬಂದು ನಿಂತಿತು. ಅಲ್ಲಿ ಒಂದು ದೊಡ್ಡ ಬಂಡೆ ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಹಸುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಿದರು. 15 ಲೇವಿಯರು ಯೆಹೋವ ದೇವರ ಮಂಜೂಷವನ್ನೂ, ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳಿದ್ದ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ, ಆ ದೊಡ್ಡ ಬಂಡೆಯ ಮೇಲಿಟ್ಟುಕೊಂಡರು. ಬೇತ್ ಷೆಮೆಷ್ ಊರಿನವರು ಆ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸಮರ್ಪಣೆಗಳನ್ನೂ ಅರ್ಪಿಸಿದರು. 16 ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ಇವುಗಳನ್ನು ಕಂಡು, ಅದೇ ದಿನದಲ್ಲಿ ತಿರುಗಿ ಎಕ್ರೋನಿಗೆ ಹೋದರು.
17 ಫಿಲಿಷ್ಟಿಯರು ದೋಷಪರಿಹಾರ ಕಾಣಿಕೆಗಾಗಿ, ಗಡ್ಡೆರೋಗದ ಬಂಗಾರ ಸ್ವರೂಪಗಳನ್ನು ಅಷ್ಡೋದಿನಿಂದ ಒಂದೂ, ಗಾಜನಿಂದ ಒಂದೂ, ಅಷ್ಕೆಲೋನದಿಂದ ಒಂದೂ, ಗತ್‌ನಿಂದ ಒಂದೂ, ಎಕ್ರೋನಿನಿಂದ ಒಂದೂ ಯೆಹೋವ ದೇವರಿಗೆ ಅರ್ಪಿಸಿದರು. 18 ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಬಲವುಳ್ಳ ಪಟ್ಟಣಗಳ, ಗ್ರಾಮಗಳ ಲೆಕ್ಕಕ್ಕೆ ಸರಿಯಾಗಿದ್ದವು. ಯೆಹೋವ ದೇವರ ಮಂಜೂಷವನ್ನಿಟ್ಟ ದೊಡ್ಡ ಬಂಡೆಯು ಇಂದಿನವರೆಗೂ ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಸಾಕ್ಷಿಯಾಗಿದೆ.
19 ಬೇತ್ ಷೆಮೆಷ್ ಊರಿನ ಜನರು ಯೆಹೋವ ದೇವರ ಮಂಜೂಷದೊಳಗೆ ಇಣಿಕಿ ನೋಡಿದ್ದರಿಂದ, ಯೆಹೋವ ದೇವರು ಅವರೊಳಗೆ ಎಪ್ಪತ್ತು ಮಂದಿಯನ್ನು ಕಠಿಣವಾಗಿ ದಂಡಿಸಿದರು. 20 ಯೆಹೋವ ದೇವರು ತಮ್ಮಲ್ಲಿ ದೊಡ್ಡ ನಾಶನಮಾಡಿದ್ದರಿಂದ, ಬೇತ್ ಷೆಮೆಷ್ ಊರಿನವರು ದುಃಖಪಟ್ಟು, “ಈ ಪರಿಶುದ್ಧ ದೇವರಾದ ಯೆಹೋವ ದೇವರ ಮುಂದೆ ನಿಲ್ಲತಕ್ಕವನ್ಯಾರು? ಇಲ್ಲಿಂದ ಮಂಜೂಷವು ಎಲ್ಲಿಗೆ ಹೋಗುವುದು?” ಎಂದು ಹೇಳಿದರು.
21 ಅವರು ಕಿರ್ಯತ್ ಯಾರೀಮಿನ ನಿವಾಸಿಗಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವ ದೇವರ ಮಂಜೂಷವನ್ನು ತಿರುಗಿ ಕಳುಹಿಸಿದ್ದಾರೆ, ನೀವು ಬಂದು ಅದನ್ನು ನಿಮ್ಮ ಬಳಿಗೆ ತೆಗೆದುಕೊಂಡು ಹೋಗಿರಿ,” ಎಂದು ಹೇಳಿದರು.