ಸಮುಯೇಲ
ದ್ವಿತೀಯ ಭಾಗ
1
ಸೌಲನ ಮರಣದ ಬಗ್ಗೆ ದಾವೀದನು ಕೇಳಿದ್ದು
ಸೌಲನ ಮರಣದ ತರುವಾಯ ದಾವೀದನು ಅಮಾಲೇಕ್ಯರನ್ನು ಸಂಹರಿಸಿ, ಚಿಕ್ಲಗಿಗೆ ತಿರುಗಿಬಂದು, ಎರಡು ದಿವಸ ಅಲ್ಲಿ ಇದ್ದ ತರುವಾಯ, ಮೂರನೆಯ ದಿನದಲ್ಲಿ ಒಬ್ಬನು ತನ್ನ ವಸ್ತ್ರಗಳನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಸೌಲನ ಪಾಳೆಯದಿಂದ ಹೊರಟು ದಾವೀದನ ಬಳಿಗೆ ಬಂದು, ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು.
ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು.
ಅದಕ್ಕವನು, “ಇಸ್ರಾಯೇಲಿನ ಪಾಳೆಯದಿಂದ ತಪ್ಪಿಸಿಕೊಂಡು ಬಂದೆನು,” ಎಂದನು.
ದಾವೀದನು ಅವನಿಗೆ, “ನಡೆದ ವರ್ತಮಾನವೇನು? ನೀನು ನನಗೆ ತಿಳಿಸು,” ಎಂದನು.
ಅವನು, “ಜನರು ಯುದ್ಧದಿಂದ ಓಡಿಹೋದರು. ಜನರಲ್ಲಿ ಅನೇಕರು ಸತ್ತರು. ಸೌಲನೂ, ಅವನ ಮಗ ಯೋನಾತಾನನೂ ಸತ್ತರು,” ಎಂದನು.
ದಾವೀದನು ತನಗೆ ವರ್ತಮಾನ ಹೇಳಿದ ಯುವಕನಿಗೆ, “ಸೌಲನೂ, ಅವನ ಮಗ ಯೋನಾತಾನನೂ ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಪ್ರಶ್ನಿಸಿದನು.
ಆಗ ಅವನು, “ನಾನು ಅಕಸ್ಮಾತ್ತಾಗಿ ಗಿಲ್ಬೋವ ಬೆಟ್ಟಕ್ಕೆ ಹೋಗಿದ್ದೆನು. ಅಲ್ಲಿ ಸೌಲನು ತನ್ನ ಈಟಿಯನ್ನು ಊರಿಕೊಂಡು ನಿಂತಿದ್ದನು. ಆಗ ರಥಗಳೂ ರಾಹುತರೂ ಅವನನ್ನು ಹಿಂದಟ್ಟಿಕೊಂಡೇ ಇದ್ದರು. ಅವನು ಹಿಂದಕ್ಕೆ ತಿರುಗಿ ನೋಡಿ, ನನ್ನನ್ನು ಕಂಡು ಕರೆದನು. ಆಗ ನಾನು, ‘ಇದ್ದೇನೆ,’ ಎಂದೆನು.
“ಆಗ ಅವನು, ‘ನೀನ್ಯಾರು?’ ಎಂದು ಕೇಳಿದನು.
“ ‘ನಾನು ಒಬ್ಬ ಅಮಾಲೇಕ್ಯನು,’ ಎಂದು ಉತ್ತರಕೊಟ್ಟೆನು.
“ಅವನು ನನಗೆ, ‘ನೀನು ದಯಮಾಡಿ ನನ್ನ ಮೇಲೆ ನಿಂತು ನನ್ನನ್ನು ಕೊಂದುಹಾಕು. ಏಕೆಂದರೆ ನನ್ನ ಪ್ರಾಣವು ಇನ್ನೂ ನನ್ನಲ್ಲಿ ಪೂರ್ಣವಾಗಿರುವುದರಿಂದ ಸಂಕಟವು ನನ್ನನ್ನು ಹಿಡಿದಿದೆ,’ ಎಂದನು.
10 “ಆದ್ದರಿಂದ ಅವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು, ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ತೋಳಿನಲ್ಲಿದ್ದ ಬಳೆಯನ್ನೂ ತೆಗೆದುಕೊಂಡು, ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದಿದ್ದೇನೆ,” ಎಂದನು.
11 ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು, 12 ಸೌಲನೂ, ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಯೆಹೋವ ದೇವರ ಜನರೂ ಖಡ್ಗದಿಂದ ಬಿದ್ದ ಕಾರಣ, ಅವರಿಗೋಸ್ಕರ ಗೋಳಾಡಿ ಅತ್ತು, ಅಸ್ತಮಾನದವರೆಗೂ ಉಪವಾಸವಾಗಿದ್ದರು.
13 ದಾವೀದನು ತನಗೆ ವರ್ತಮಾನ ತಿಳಿಸಿದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು.
ಅವನು, “ನಾನು ವಿದೇಶಿಯ ಮಗನಾದ ಅಮಾಲೇಕ್ಯನು,” ಎಂದನು.
14 ಆಗ ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈ ಎತ್ತುವುದಕ್ಕೆ ಯಾಕೆ ಭಯಪಡಲಿಲ್ಲ?” ಎಂದು ಕೇಳಿದನು.
15 ಯುವಕರಲ್ಲಿ ಒಬ್ಬನನ್ನು ಕರೆದು, “ನೀನು ಇವನನ್ನು ಕೊಲ್ಲು,” ಎಂದನು. ಹಾಗೆಯೇ ಅವನು ಅವನನ್ನು ಹೊಡೆದು ಕೊಂದನು. 16 ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿ ಹೇಳಿದ್ದರಿಂದ, ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ,” ಎಂದನು.
ಸೌಲ ಮತ್ತು ಯೋನಾತಾನರಿಗಾಗಿ ದಾವೀದನು ದುಃಖಿಸಿದ್ದು
17 ಆಗ ದಾವೀದನು ಸೌಲನ ಮೇಲೆಯೂ, ಅವನ ಮಗ ಯೋನಾತಾನನ ಮೇಲೆಯೂ ಶೋಕದಿಂದ ಈ ಗೀತೆ ಹಾಡಿ ಗೋಳಾಡಿದನು. 18 ಇದಲ್ಲದೆ ದಾವೀದನು ಬಿಲ್ಲೆ ಎಂಬ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಹೇಳಿದನು. ಇದು ಯಾಷಾರನ ಗ್ರಂಥದಲ್ಲಿ ಬರೆಯಲಾಗಿದೆ:
19 “ಇಸ್ರಾಯೇಲೇ, ನಿನ್ನ ಮಹಿಮೆಯು ನಿನ್ನ ಬೆಟ್ಟಗಳ ಮೇಲೆ ಕೊಲೆಯಾಗಿ ಬಿದ್ದಿದೆ.
ಪರಾಕ್ರಮಶಾಲಿಗಳು ಹೇಗೆ ಬಿದ್ದರು!
 
20 “ಗತ್ ಊರಿನಲ್ಲಿ ಇದನ್ನು ತಿಳಿಸಬೇಡಿರಿ.
ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ.
ಫಿಲಿಷ್ಟಿಯರ ಪುತ್ರಿಯರು ಸಂತೋಷಪಡಬಾರದು;
ಸುನ್ನತಿ ಇಲ್ಲದವರ ಪುತ್ರಿಯರು ಉತ್ಸಾಹಪಡಬಾರದು.
 
21 “ಗಿಲ್ಬೋವ ಬೆಟ್ಟಗಳೇ,
ನಿಮ್ಮ ಮೇಲೆ ಮಂಜೂ ಮಳೆಯೂ ಬೀಳದೆ ಇರಲಿ,
ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ.
ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಯೂ ಅವಮಾನಗೊಂಡು ಬಿದ್ದವು.
ಸೌಲನ ಗುರಾಣಿಯೂ ಎಣ್ಣೆಯಿಂದ ಅಭಿಷಿಕ್ತನಲ್ಲದವನ ಗುರಾಣಿಯಂತೆ ಆಯಿತು.
 
22 “ಹತರಾದವರ ರಕ್ತದಿಂದಲೂ,
ಯೋನಾತಾನನ ಬಿಲ್ಲು
ಹಿಂದಕ್ಕೆ ತಿರುಗಲಿಲ್ಲ.
ಸೌಲನ ಖಡ್ಗ ತೃಪ್ತಿಗೊಳ್ಳದೆ ತಿರುಗಿ ಬರಲಿಲ್ಲ.
23 ಸೌಲನೂ ಯೋನಾತಾನನೂ
ಜೀವದಿಂದಿದ್ದಾಗ ಪ್ರಿಯಕರವಾಗಿಯೂ,
ಸಂತೋಷಕರವಾಗಿಯೂ ಇದ್ದರು.
ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು.
ಅವರು ಹದ್ದುಗಳಿಗಿಂತ ವೇಗವುಳ್ಳವರೂ, ಸಿಂಹಗಳಿಗಿಂತ ಬಲವುಳ್ಳವರೂ ಆಗಿದ್ದರು.
 
24 “ಇಸ್ರಾಯೇಲಿನ ಪುತ್ರಿಯರೇ,
ಸೌಲನಿಗೋಸ್ಕರ ಅಳಿರಿ.
ನಿಮಗೆ ರಕ್ತಾಂಬರವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ.
ನಿಮ್ಮ ಉಡುಗೆಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.
 
25 “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ.
ಯೋನಾತಾನನೇ, ನೀನು ಉನ್ನತ ಸ್ಥಳಗಳಲ್ಲಿ ಹತನಾಗಿ ಬಿದ್ದಿರುವಿ.
26 ನನ್ನ ಸಹೋದರನಾದ ಯೋನಾತಾನನೇ,
ನಾನು ನಿನಗೋಸ್ಕರ ಶೋಕಿಸುತ್ತೇನೆ. ನೀನು ನನಗೆ ಬಹಳ ಮನೋಹರನಾಗಿದ್ದಿ.
ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯಕರವಾಗಿತ್ತು.
ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.
 
27 “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ.
ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.”