2
ದಾವೀದನು ಯೆಹೂದದ ಮೇಲೆ ಅರಸನಾಗಿ ಅಭಿಷೇಕ ಹೊಂದಿದ್ದು
ಇದಾದ ಮೇಲೆ ದಾವೀದನು ಯೆಹೋವ ದೇವರನ್ನು, “ಯೆಹೂದದ ಪಟ್ಟಣಗಳಲ್ಲಿ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಿದನು.
ಯೆಹೋವ ದೇವರು ಅವನಿಗೆ, “ಹೋಗು,” ಎಂದರು.
ಅದಕ್ಕವನು, “ನಾನು ಎಲ್ಲಿಗೆ ಹೋಗಲಿ?” ಎಂದನು.
ಅದಕ್ಕೆ ದೇವರು, “ಹೆಬ್ರೋನಿಗೆ,” ಎಂದರು.
ಹಾಗೆಯೇ ದಾವೀದನೂ, ಹಾಗೂ ಅವನ ಇಬ್ಬರು ಹೆಂಡತಿಯರಾದ ಇಜ್ರೆಯೇಲಿನವಳಾಗಿರುವ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ವಿಧವೆಯಾಗಿದ್ದ ಅಬೀಗೈಲಳೂ ಅಲ್ಲಿಗೆ ಹೋದರು. ಇದಲ್ಲದೆ ದಾವೀದನು ತನ್ನ ಸಂಗಡ ಇದ್ದ ಜನರನ್ನೂ, ಅವರವರ ಮನೆಯವರನ್ನೂ ಕರೆದುಕೊಂಡು ಹೋದನು. ಅವರು ಹೆಬ್ರೋನಿನ ಪಟ್ಟಣಗಳಲ್ಲಿ ವಾಸವಾಗಿದ್ದರು. ಆಗ ಯೆಹೂದನ ಮನುಷ್ಯರು ಹೆಬ್ರೋನಿಗೆ ಬಂದು ಅಲ್ಲಿ ದಾವೀದನನ್ನು ಯೆಹೂದದವರ ಮೇಲೆ ಅರಸನನ್ನಾಗಿ ಅಭಿಷೇಕ ಮಾಡಿಸಿದರು.
ಯಾಬೇಷ್ ಗಿಲ್ಯಾದಿನವರು ಸೌಲನನ್ನು ಸಮಾಧಿಮಾಡಿದರೆಂದು ದಾವೀದನಿಗೆ ತಿಳಿಸಿದಾಗ, ದಾವೀದನು ಯಾಬೇಷ್ ಗಿಲ್ಯಾದಿನವರಿಗೆ ದೂತರನ್ನು ಕಳುಹಿಸಿ, “ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ, ಅವನನ್ನು ಸಮಾಧಿಮಾಡಿದ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ. ಈಗ ಯೆಹೋವ ದೇವರು ನಿಮಗೆ ದಯೆಯನ್ನೂ, ನಂಬಿಗಸ್ತಿಕೆಯನ್ನೂ ತೋರಿಸಲಿ. ನೀವು ಈ ಕಾರ್ಯವನ್ನು ಮಾಡಿದ್ದರಿಂದ, ನಾನು ನಿಮಗೆ ಪ್ರತ್ಯುಪಕಾರ ಮಾಡುವೆನು. ನೀವು ಪರಾಕ್ರಮಶಾಲಿಗಳಾಗಿದ್ದು, ನಿಮ್ಮ ಕೈಗಳು ಬಲವಾಗಿರಲಿ. ಏಕೆಂದರೆ ನಿಮ್ಮ ಯಜಮಾನನಾದ ಸೌಲನು ಮರಣಹೊಂದಿದನು. ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕ ಮಾಡಿದರು,” ಎಂದನು.
ದಾವೀದ ಮತ್ತು ಸೌಲನ ಕುಟುಂಬಗಳ ನಡುವೆ ಯುದ್ಧ
ಸೌಲನ ಸೈನ್ಯಾಧಿಪತಿಯಾದ ನೇರನ ಮಗನಾಗಿರುವ ಅಬ್ನೇರನು ಸೌಲನ ಮಗ ಈಷ್ಬೋಶೆತನನ್ನು ಮಹನಯಿಮಿಗೆ ಕರೆದುಕೊಂಡು ಹೋದನು. ಅಲ್ಲಿ ಅವನನ್ನು ಗಿಲ್ಯಾದ್, ಅಶೂರ್, ಇಜ್ರೆಯೇಲ್, ಎಫ್ರಾಯೀಮ್, ಬೆನ್ಯಾಮೀನ್ ಜನರ ಮೇಲೆಯೂ, ಇಸ್ರಾಯೇಲರೆಲ್ಲರ ಮೇಲೆಯೂ ಅರಸನನ್ನಾಗಿ ಮಾಡಿದನು.
10 ಸೌಲನ ಮಗ ಈಷ್ಬೋಶೆತನು ಇಸ್ರಾಯೇಲಿನ ಮೇಲೆ ಆಳುವುದಕ್ಕೆ ಆರಂಭಿಸಿದಾಗ, ನಾಲ್ವತ್ತು ವರ್ಷ ಪ್ರಾಯದವನಾಗಿದ್ದು ಎರಡು ವರ್ಷ ಆಳಿದನು. ಆದರೆ ಯೆಹೂದ ಗೋತ್ರದವರು ದಾವೀದನನ್ನು ಹಿಂಬಾಲಿಸಿದರು. 11 ದಾವೀದನು ಹೆಬ್ರೋನಿನಲ್ಲಿ ಯೆಹೂದ ಗೋತ್ರದವರ ಮೇಲೆ ಅರಸನಾಗಿದ್ದ ಕಾಲವು ಏಳು ವರ್ಷ ಆರು ತಿಂಗಳು.
12 ನೇರನ ಮಗನಾಗಿರುವ ಅಬ್ನೇರನೂ, ಸೌಲನ ಮಗ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದನು. 13 ಚೆರೂಯಳ ಮಗ ಯೋವಾಬನೂ, ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಕೊಂಡರು. ಅವರು ಕೊಳದ ಆಚೆಯಲ್ಲಿಯೂ, ಇವರು ಕೊಳದ ಈಚೆಯಲ್ಲಿಯೂ ಕುಳಿತುಕೊಂಡರು.
14 ಆಗ ಅಬ್ನೇರನು ಯೋವಾಬನಿಗೆ, “ಕೆಲವು ಜನ ಯುವಕರು ಎದ್ದು ನಮ್ಮ ಮುಂದೆ ಮುಷ್ಠಿ ಯುದ್ಧ ಸ್ಪರ್ಧಿಸಲಿ,” ಎಂದನು.
ಅದಕ್ಕೆ ಯೋವಾಬನು, “ಅವರು ಹಾಗೆಯೇ ಮಾಡಲಿ,” ಎಂದನು.
15 ಆದ್ದರಿಂದ ಸೌಲನ ಮಗ ಈಷ್ಬೋಶೆತನ ಕಡೆಯವನಾದ ಬೆನ್ಯಾಮೀನ್ಯರಲ್ಲಿ ಹನ್ನೆರಡು ಮಂದಿಯೂ, ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಎದ್ದು ಹೊರಟುಬಂದು, 16 ಅವರಲ್ಲಿ ಒಬ್ಬರ ಪಕ್ಕೆಯಲ್ಲಿ ಒಬ್ಬರು ಖಡ್ಗವನ್ನು ತಿವಿದುದರಿಂದ ಎಲ್ಲರೂ ಸತ್ತುಬಿದ್ದರು. ಆದ್ದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ “ಹೆಲ್ಕಾತ್ ಹಸ್ಸೂರಿಂ” ಅಂದರೆ, “ಹದಗತ್ತಿ ಕ್ಷೇತ್ರ” ಎಂದು ಹೆಸರಾಯಿತು.
17 ಇದಲ್ಲದೆ, ಆ ದಿನದಲ್ಲಿ ಘೋರವಾದ ಯುದ್ಧವಾಯಿತು. ಅಬ್ನೇರನೂ, ಇಸ್ರಾಯೇಲರೂ ದಾವೀದನ ಸೇವಕರಿಂದ ಸೋತುಹೋದರು.
18 ಚೆರೂಯಳ ಮೂವರು ಮಕ್ಕಳಾದ ಯೋವಾಬನೂ, ಅಬೀಷೈಯನೂ, ಅಸಾಯೇಲನೂ ಅಲ್ಲಿ ಇದ್ದರು. ಅಸಾಯೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು. 19 ಅಸಾಯೇಲನು ಅಬ್ನೇರನನ್ನು ಬಲಗಡೆಗಾದರೂ, ಎಡಗಡೆಗಾದರೂ ತಿರುಗದೆ ಬೆನ್ನಟ್ಟಿದನು. 20 ಆಗ ಅಬ್ನೇರನು ಹಿಂದಕ್ಕೆ ತಿರುಗಿ ನೋಡಿ, “ನೀನು ಅಸಾಯೇಲನು ಅಲ್ಲವೇ?” ಎಂದನು.
ಅದಕ್ಕವನು, “ನಾನೇ,” ಎಂದನು.
21 ಆಗ ಅಬ್ನೇರನು ಅವನಿಗೆ, “ನೀನು ಬಲಗಡೆಗಾದರೂ, ಎಡಗಡೆಗಾದರೂ ತಿರುಗು. ಯುವಕರಲ್ಲಿ ಒಬ್ಬನನ್ನು ಹಿಡಿದು ಅವನ ಆಯುಧಗಳನ್ನು ತೆಗೆದುಕೋ,” ಎಂದನು. ಆದರೆ ಅಸಾಯೇಲನು ಅವನನ್ನು ಹಿಂಬಾಲಿಸುವುದನ್ನು ಬಿಡಲೇ ಇಲ್ಲ.
22 ಅಬ್ನೇರನು ಅಸಾಯೇಲನಿಗೆ, “ನನ್ನನ್ನು ಬೆನ್ನಟ್ಟುವುದನ್ನು ಬಿಟ್ಟುಬಿಡು, ನಾನು ಏಕೆ ನಿನ್ನನ್ನು ನೆಲಕ್ಕೆ ಹೊಡೆದು ಕೆಡವಿಬಿಡಬೇಕು? ನಾನು ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ?” ಎಂದನು.
23 ಆದರೆ ಅಸಾಯೇಲನು ಒಪ್ಪದೆ ಹೋದದ್ದರಿಂದ, ಅಬ್ನೇರನು ತನ್ನ ಭರ್ಜಿಯ ಹಿಂಭಾಗದ ಮೊನೆಯಿಂದ ಅವನ ಹೊಟ್ಟೆಯೊಳಗೆ ತಿವಿಯಲು, ಅದು ಅವನ ಬೆನ್ನ ಹೊರಗೆ ತೂರಿ ಬಂತು. ಅವನು ಅಲ್ಲಿ ಬಿದ್ದು, ಅದೇ ಸ್ಥಳದಲ್ಲಿ ಸತ್ತನು. ಅಸಾಯೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು.
24 ಆದರೆ ಯೋವಾಬನೂ, ಅಬೀಷೈಯನೂ ಅಬ್ನೇರನನ್ನು ಹಿಂದಟ್ಟಿ, ಸೂರ್ಯ ಆಸ್ತಮಿಸುವವರೆಗೆ ಗಿಬ್ಯೋನಿನ ಮರುಭೂಮಿಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದವರೆಗೆ ಬಂದರು. 25 ಆಗ ಅಬ್ನೇರನ ಹಿಂದೆ ಬೆನ್ಯಾಮೀನನ ಜನರು ಒಟ್ಟಾಗಿ ಬಂದು ಸೈನ್ಯವಾಗಿ ಕೂಡಿಕೊಂಡು, ಒಂದು ಗುಡ್ಡದ ಶಿಖರದಲ್ಲಿ ನಿಂತಿದ್ದರು.
26 ಆಗ ಅಬ್ನೇರನು ಯೋವಾಬನಿಗೆ, “ಖಡ್ಗವು ಯಾವಾಗಲೂ ನುಂಗಿ ಬಿಡುವುದೋ? ಅಂತ್ಯದಲ್ಲಿ ಅದು ಕಹಿತನಕ್ಕೆ ನಡೆಸುವುದೆಂದು ನಿನಗೆ ಗೊತ್ತಾಗಲಿಲ್ಲವೋ? ತಮ್ಮ ಸಹೋದರರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಕ್ಕೆ ತಿರುಗುವಂತೆ ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವೆ?” ಎಂದು ಕೂಗಿ ಹೇಳಿದನು.
27 ಅದಕ್ಕೆ ಯೋವಾಬನು, “ದೇವರ ಜೀವದಾಣೆ, ನೀನು ಮಾತನಾಡದೆ ಹೋದರೆ, ನಿಶ್ಚಯವಾಗಿ ಪ್ರತಿ ಮನುಷ್ಯನು ಉದಯದವರೆಗೆ ತನ್ನ ಸಹೋದರನನ್ನು ಹಿಂದಟ್ಟಿ ಹೋಗುತ್ತಿದ್ದನು,” ಎಂದನು.
28 ಹೀಗೆ ಯೋವಾಬನು ತುತೂರಿಯನ್ನು ಊದಿದನು. ಆಗ ಸೈನಿಕರೆಲ್ಲರೂ ನಿಂತರು. ಇಸ್ರಾಯೇಲರನ್ನು ಪುನಃ ಹಿಂದಟ್ಟಲಿಲ್ಲ, ಯುದ್ಧವು ನಿಂತಿತು.
29 ಅಬ್ನೇರನೂ, ಅವನ ಜನರೂ ಆ ರಾತ್ರಿಯೆಲ್ಲಾ ಅರಾಬಾ ಕಣಿವೆಯಲ್ಲಿ ನಡೆದು, ಯೊರ್ದನನ್ನು ದಾಟಿ, ಬಿಥ್ರೋನ್ ಕಣಿವೆಯನ್ನು ಹಾದು ಮಹನಯಿಮಿಗೆ ಬಂದರು.
30 ಯೋವಾಬನು ಅಬ್ನೇರನ ಹಿಂದಿನಿಂದ ತಿರುಗಿ ಜನರೆಲ್ಲರನ್ನು ಕೂಡಿಸಿಕೊಂಡಾಗ, ದಾವೀದನ ಸೇವಕರಲ್ಲಿ ಹತ್ತೊಂಬತ್ತು ಜನರೂ, ಅಸಾಯೇಲನೂ ಕಡಿಮೆಯಾಗಿದ್ದರು. 31 ದಾವೀದನ ಸೇವಕರು ಬೆನ್ಯಾಮೀನ್ಯರಲ್ಲಿಯೂ, ಅಬ್ನೇರನ ಜನರಲ್ಲಿಯೂ ಮುನ್ನೂರ ಅರವತ್ತು ಜನರನ್ನು ಹೊಡೆದದ್ದರಿಂದ ಅವರು ಸತ್ತರು. 32 ಅವರು ಅಸಾಯೇಲನನ್ನು ಎತ್ತಿಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು.