12
ನಾತಾನನು ದಾವೀದನನ್ನು ಗದರಿಸಿದ್ದು
ಯೆಹೋವ ದೇವರು ದಾವೀದನ ಬಳಿಗೆ ನಾತಾನನನ್ನು ಕಳುಹಿಸಿದರು. ಅವನು ದಾವೀದನ ಬಳಿಗೆ ಬಂದು ಅವನಿಗೆ, “ಒಂದು ಊರಿನಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು. ಐಶ್ವರ್ಯವಂತನಿಗೆ ಕುರಿದನಗಳು ಬಹಳವಾಗಿದ್ದವು. ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡ, ಅವನ ಮಕ್ಕಳ ಸಂಗಡ ಬೆಳೆದು, ಅವನ ಸ್ವಂತ ಆಹಾರ ತಿಂದು, ಅವನ ಪಾತ್ರೆಯಲ್ಲಿ ಕುಡಿದು, ಅವನ ಮಗ್ಗುಲಲ್ಲಿ ಮಲಗಿಕೊಂಡು, ಅವನಿಗೆ ಮಗಳ ಹಾಗಿತ್ತು.
“ಐಶ್ವರ್ಯವಂತನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ, ಐಶ್ವರ್ಯವಂತನು ಅತಿಥಿಗಾಗಿ ಅಡಿಗೆಯನ್ನು ಮಾಡಿಸುವುದಕ್ಕೆ ತನ್ನ ಕುರಿದನಗಳಲ್ಲಿ ಒಂದನ್ನೂ ತೆಗೆದುಕೊಳ್ಳಲು ಮನಸ್ಸಿಲ್ಲದೆ, ಆ ಬಡವನ ಕುರಿಯನ್ನು ತೆಗೆದುಕೊಂಡು, ತನ್ನ ಬಳಿಗೆ ಬಂದ ಮನುಷ್ಯನಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು,” ಎಂದನು.
ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ, “ಯೆಹೋವ ದೇವರ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು. ಅವನು ಕನಿಕರಪಡದೆ ಈ ಕಾರ್ಯವನ್ನು ಮಾಡಿದ್ದರಿಂದ, ಆ ಕುರಿಗೋಸ್ಕರವಾಗಿ ನಾಲ್ಕರಷ್ಟು ತಿರುಗಿ ಕೊಡಬೇಕು,” ಎಂದನು.
ಆಗ ನಾತಾನನು ದಾವೀದನಿಗೆ, “ನೀನೇ ಆ ಮನುಷ್ಯನು! ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ, ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು; ನಿನ್ನ ಯಜಮಾನನ ಮನೆಯನ್ನೂ, ನಿನ್ನ ಯಜಮಾನನ ಹೆಂಡತಿಯರನ್ನೂ ನಿನಗೆ ಕೊಟ್ಟು; ಇಸ್ರಾಯೇಲಿನ ಮನೆಯನ್ನೂ, ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು. ಇದು ಸಾಲದೆ ಇದ್ದರೆ, ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು. ನೀನು ಯೆಹೋವ ದೇವರ ದೃಷ್ಟಿಗೆ ಈ ಕೆಟ್ಟ ಕಾರ್ಯವನ್ನು ಮಾಡುವಂತೆ ಅವರ ವಾಕ್ಯವನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಖಡ್ಗದಿಂದ ಹೊಡೆದು ಹಾಕಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯಾಗಿ ತೆಗೆದುಕೊಂಡೆ. ಇದಲ್ಲದೆ ಅವನನ್ನು ಅಮ್ಮೋನಿಯರ ಖಡ್ಗದಿಂದ ಕೊಂದು ಹಾಕಿಸಿದೆ. 10 ಈಗ ನೀನು ನನ್ನನ್ನು ತಿರಸ್ಕರಿಸಿ, ಹಿತ್ತಿಯನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡದ್ದರಿಂದ, ಖಡ್ಗವು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ತೊಲಗದು.
11 “ಯೆಹೋವ ದೇವರು ಹೇಳುವುದೇನೆಂದರೆ: ‘ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ, ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು, ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲು ಹೊತ್ತಿನಲ್ಲಿಯೇ ಅವರ ಸಂಗಡ ಮಲಗುವನು. 12 ಏಕೆಂದರೆ ನೀನು ಮರೆಯಲ್ಲಿ ಅದನ್ನು ಮಾಡಿದೆ. ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲರೆಲ್ಲರ ಮುಂದೆಯೂ, ಹಗಲು ಹೊತ್ತಿನಲ್ಲಿಯೂ ಮಾಡುವೆನು,’ ” ಎಂದನು.
13 ಆಗ ದಾವೀದನು ನಾತಾನನಿಗೆ, “ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇನೆ,” ಎಂದನು.
ನಾತಾನನು ದಾವೀದನಿಗೆ, “ನೀನು ಸಾಯದ ಹಾಗೆ ಯೆಹೋವ ದೇವರು ನಿನ್ನ ಪಾಪವನ್ನು ಪರಿಹರಿಸಿದರು. 14 ಹೇಗಿದ್ದರೂ ಈ ಕಾರ್ಯದಿಂದ ನೀನು ಯೆಹೋವ ದೇವರ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ, ನಿನಗೆ ಹುಟ್ಟಿದ ಮಗುವು ಖಂಡಿತವಾಗಿ ಸಾಯುವುದು,” ಎಂದನು.
15 ನಂತರ ನಾತಾನನು ತನ್ನ ಮನೆಗೆ ಹೋದನು. ಯೆಹೋವ ದೇವರು, ಊರೀಯನ ಹೆಂಡತಿಯು ದಾವೀದನಿಗೆ ಹೆತ್ತ ಕೂಸನ್ನು ಬಾಧಿಸಲು, ಅದು ಬಹಳ ಅಸ್ವಸ್ಥವಾಯಿತು. 16 ದಾವೀದನು ಕೂಸಿಗೋಸ್ಕರ ದೇವರನ್ನು ಬೇಡಿಕೊಂಡನು. ಇದಲ್ಲದೆ ದಾವೀದನು ಉಪವಾಸ ಮಾಡಿ, ಒಳಗಿನ ಕೋಣೆಯಲ್ಲಿ ನೆಲದ ಮೇಲೆಯೇ ರಾತ್ರಿ ಕಳೆಯುತ್ತಿದ್ದನು. 17 ಅವನನ್ನು ಎಬ್ಬಿಸುವುದಕ್ಕೆ ಅವನ ಮನೆಯ ಹಿರಿಯರು ಅವನ ಬಳಿಗೆ ಬಂದರು. ಆದರೆ ಅವನಿಗೆ ಮನಸ್ಸಿಲ್ಲದೆ ಇತ್ತು. ಅವರ ಸಂಗಡ ಭೋಜನ ಮಾಡದೆ ಇದ್ದನು.
18 ಮಗುವು ಏಳನೆಯ ದಿವಸ ಸತ್ತು ಹೋಯಿತು. ಆಗ ಮಗುವು ಸತ್ತು ಹೋಯಿತೆಂದು ದಾವೀದನ ಸೇವಕರು ಅವನಿಗೆ ತಿಳಿಸುವುದಕ್ಕೆ ಭಯಪಟ್ಟರು. ಏಕೆಂದರೆ, “ಮಗುವು ಇನ್ನೂ ಬದುಕಿರುವಾಗ, ನಾವು ಅವನ ಸಂಗಡ ಮಾತನಾಡಿದಾಗ, ಅವನು ನಮ್ಮ ಮಾತನ್ನು ಕೇಳದೆ ಹೋದನು. ಈಗ ಮಗುವು ಸತ್ತು ಹೋಯಿತೆಂದು ನಾವು ಅವನಿಗೆ ಹೇಳಿದರೆ, ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುವನೋ?” ಎಂದುಕೊಂಡರು.
19 ಆದರೆ ದಾವೀದನು ತನ್ನ ಸೇವಕರು ಪಿಸುಗುಟ್ಟುವುದನ್ನು ಕಂಡು, ಮಗು ಸತ್ತು ಹೋಯಿತೆಂದು ಗ್ರಹಿಸಿಕೊಂಡನು. ದಾವೀದನು ತನ್ನ ಸೇವಕರಿಗೆ, “ಮಗುವು ಸತ್ತು ಹೋಯಿತೋ?” ಎಂದನು.
ಅವರು, “ಸತ್ತು ಹೋಯಿತು,” ಎಂದರು.
20 ಆಗ ದಾವೀದನು ನೆಲದಿಂದ ಎದ್ದು ಸ್ನಾನಮಾಡಿ, ತೈಲವನ್ನು ಹಚ್ಚಿಕೊಂಡವನಾಗಿ, ಬದಲು ವಸ್ತ್ರಗಳನ್ನು ಧರಿಸಿಕೊಂಡು, ಯೆಹೋವ ದೇವರ ಮನೆಗೆ ಹೋಗಿ, ಅವರನ್ನು ಆರಾಧಿಸಿ ತನ್ನ ಮನೆಗೆ ಬಂದನು. ಅವನ ಕೋರಿಕೆಯ ಮೇರೆಗೆ ಅವರು ಅವನಿಗೆ ಆಹಾರವನ್ನು ಬಡಿಸಿದರು ಮತ್ತು ಅವನು ತಿನ್ನುತ್ತಿದ್ದನು.
21 ಅವನ ಸೇವಕರು ಅವನಿಗೆ, “ಇದು ಏನು ನೀನು ಮಾಡಿದ್ದು? ಮಗುವು ಜೀವದಿಂದ ಇರುವಾಗ, ನೀನು ಉಪವಾಸವಾಗಿದ್ದು ಅದಕ್ಕೋಸ್ಕರ ಅಳುತ್ತಿದ್ದೆ. ಆದರೆ ಮಗುವು ಸತ್ತಮೇಲೆ ನೀನು ಎದ್ದು ರೊಟ್ಟಿಯನ್ನು ತಿಂದೆ,” ಎಂದರು.
22 ಅದಕ್ಕವನು, “ಮಗುವು ಜೀವದಿಂದ ಇರುವಾಗ ಅದು ಬದುಕುವ ಹಾಗೆ ಯೆಹೋವ ದೇವರು ನನಗೆ ದಯಮಾಡುವರೋ ಎಂದು ಉಪವಾಸ ಮಾಡಿ ಅತ್ತೆನು. 23 ಆದರೆ ಈಗ ಸತ್ತಿದೆಯಲ್ಲಾ. ನಾನು ಉಪವಾಸ ಮಾಡುವುದು ಏಕೆ? ನಾನು ಅದನ್ನು ತಿರುಗಿ ಬರಮಾಡಬಲ್ಲೆನೋ? ನಾನು ಅದರ ಬಳಿಗೆ ಹೋಗುವೆನು. ಆದರೆ ಅದು ನನ್ನ ಬಳಿಗೆ ತಿರುಗಿ ಬರುವುದಿಲ್ಲ,” ಎಂದನು.
24 ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಳನ್ನು ಆಧರಿಸಿ, ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು. ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಯೆಹೋವ ದೇವರು ಅವನನ್ನು ಪ್ರೀತಿ ಮಾಡಿದರು. 25 ಪ್ರವಾದಿಯಾದ ನಾತಾನನ ಮುಖಾಂತರ ಯೆಹೋವ ದೇವರ ನಿಮಿತ್ತ ಅವನಿಗೆ ಯೆದೀದ್ಯ* ಎಂದು ಹೆಸರಿಟ್ಟನು.
26 ಯೋವಾಬನು ಅಮ್ಮೋನಿಯರ ರಬ್ಬತಿನ ಮೇಲೆ ಯುದ್ಧಮಾಡಿ, ಅರಮನೆ ಇದ್ದ ಪಟ್ಟಣವನ್ನು ವಶಪಡಿಸಿಕೊಂಡನು. 27 ಯೋವಾಬನು ದಾವೀದನಿಗೆ, “ನಾನು ರಬ್ಬಕ್ಕೆ ವಿರೋಧವಾಗಿ ಯುದ್ಧಮಾಡಿ, ನೀರು ಪೂರೈಕೆಯ ಭಾಗವನ್ನು ಸ್ವಾಧೀನ ಮಾಡಿಕೊಂಡಿದ್ದೇನೆ. 28 ಈಗ ನಾನು ಪಟ್ಟಣವನ್ನು ಹಿಡಿದು, ಅದು ನನ್ನ ಹೆಸರಿಗೆ ಕೀರ್ತಿ ಬಾರದ ಹಾಗೆ ನೀನು ಜನರನ್ನು ಕೂಡಿಸಿಕೊಂಡು ಬಂದು, ಪಟ್ಟಣವನ್ನು ಮುತ್ತಿಗೆ ಹಾಕಿ ಹಿಡಿ,” ಎಂದು ಹೇಳಿ ದೂತರನ್ನು ಕಳುಹಿಸಿದನು.
29 ಹಾಗೆಯೇ ದಾವೀದನು ಜನರೆಲ್ಲರನ್ನು ಕೂಡಿಸಿಕೊಂಡು ರಬ್ಬಕ್ಕೆ ಹೋಗಿ, ಅದರ ಮೇಲೆ ಯುದ್ಧಮಾಡಿ ಅದನ್ನು ವಶಮಾಡಿಕೊಂಡನು. 30 ಇದಲ್ಲದೆ ದಾವೀದನು ಅಮ್ಮೋನಿಯರ ಅರಸನ ತಲೆಯ ಮೇಲೆ ಇದ್ದ ಕಿರೀಟವನ್ನು ಸಹ ತೆಗೆದುಕೊಂಡನು. ಅದು ಮೂವತ್ತೈದು ಕಿಲೋಗ್ರಾಂ ತೂಕದ್ದಾಗಿತ್ತು ಅದನ್ನು ಬಂಗಾರದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ ಅಲಂಕರಿಸಲಾಗಿತ್ತು, ಆ ಕಿರೀಟವನ್ನು ದಾವೀದನ ಶಿರಸ್ಸಿನಲ್ಲಿ ಧರಿಸಲಾಯಿತು. ಆ ಪಟ್ಟಣದೊಳಗಿಂದ ಅತ್ಯಧಿಕವಾದ ಕೊಳ್ಳೆಯನ್ನೂ ತೆಗೆದುಕೊಂಡು ಬಂದನು. 31 ಇದಲ್ಲದೆ ಅವನು ಅದರಲ್ಲಿದ್ದ ಜನರನ್ನು ಹೊರಗೆ ತಂದು, ಅವರನ್ನು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟಿಗೆಗಳನ್ನು ಸುಡುವುದಕ್ಕೂ ಇಟ್ಟನು. ಅದೇ ಪ್ರಕಾರ ದಾವೀದನು ಅಮ್ಮೋನಿಯರ ಸಮಸ್ತ ಪಟ್ಟಣಗಳಿಗೂ ಮಾಡಿದನು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ತಿರುಗಿಬಂದನು.
* 12:25 12:25 ಯೆದೀದ್ಯ ಅರ್ಥ ಯೆಹೋವ ದೇವರಿಗೆ ಪ್ರಿಯನು