13
ಅಮ್ನೋನನು ಮತ್ತು ತಾಮಾರಳು
ಕಾಲಾಂತರದಲ್ಲಿ ದಾವೀದನ ಮಗ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸುಂದರಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗ ಅಮ್ನೋನನು ಪ್ರೀತಿಮಾಡಿದನು.
ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ಸಂಕಟಪಟ್ಟು ಅಸ್ವಸ್ಥನಾದನು. ಅವಳು ಕನ್ಯೆಯಾಗಿದ್ದಳು. ಆದ್ದರಿಂದ ಅವಳನ್ನು ಏನಾದರೂ ಮಾಡುವುದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು.
ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮೆಯನ ಮಗ ಯೊನಾದಾಬನೆಂಬ ಹೆಸರುಳ್ಳ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಬಹು ಕುಯುಕ್ತಿಯುಳ್ಳವನಾಗಿದ್ದನು. ಯೋನಾದಾಬನು ಅಮ್ನೋನನಿಗೆ, “ಅರಸನ ಮಗನಾದ ನೀನು ದಿನದಿನಕ್ಕೆ ಏಕೆ ಕ್ಷೀಣವಾಗಿ ಹೋಗುತ್ತೀ? ನನಗೆ ತಿಳಿಸುವುದಿಲ್ಲವೋ?” ಎಂದನು.
ಅದಕ್ಕೆ ಅಮ್ನೋನನು ಅವನಿಗೆ, “ನಾನು ನನ್ನ ಸಹೋದರನಾಗಿರುವ ಅಬ್ಷಾಲೋಮನ ಸಹೋದರಿ ತಾಮಾರಳನ್ನು ಪ್ರೀತಿಮಾಡುತ್ತಿದ್ದೇನೆ,” ಎಂದನು.
ಆಗ ಯೋನಾದಾಬನು ಅವನಿಗೆ, “ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವುದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ, ‘ನನ್ನ ಸಹೋದರಿ ತಾಮಾರಳು ಬರುವ ಹಾಗೆ ದಯಮಾಡಬೇಕು. ನಾನು ಅವಳ ಕೈಯಿಂದ ಉಣ್ಣುವ ಹಾಗೆ, ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ, ನನಗೆ ಆಹಾರ ಕೊಡಲಿ,’ ಎಂದು ಹೇಳು,” ಎಂದನು.
ಅಮ್ನೋನನು ಅದೇ ಪ್ರಕಾರ ರೋಗಿಷ್ಟನ ಹಾಗೆ ಮಲಗಿಕೊಂಡನು. ಅರಸನು ತನ್ನನ್ನು ನೋಡುವುದಕ್ಕೆ ಬಂದಾಗ ಅಮ್ನೋನನು ಅರಸನಿಗೆ, “ನೀವು ನನ್ನ ಸಹೋದರಿ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣು ಮುಂದೆ ಎರಡು ಭಕ್ಷ್ಯಗಳನ್ನು ಮಾಡುವುದಕ್ಕೆ ಬರಲಿ,” ಎಂದನು.
ಆಗ ದಾವೀದನು ತನ್ನ ಮನೆಯಲ್ಲಿರುವ ತಾಮಾರಳ ಬಳಿಗೆ ಮನುಷ್ಯನನ್ನು ಕಳುಹಿಸಿ, “ನೀನು ನಿನ್ನ ಸಹೋದರ ಅಮ್ನೋನನ ಮನೆಗೆ ಹೋಗಿ, ಅವನಿಗೆ ಅಡಿಗೆಯನ್ನು ಮಾಡಿ ಇಡು,” ಎಂದನು. ಹಾಗೆಯೇ ತಾಮಾರಳು ತನ್ನ ಸಹೋದರ ಅಮ್ನೋನನ ಮನೆಗೆ ಹೋದಳು. ಆಗ ಅವನು ಮಲಗಿದ್ದನು. ಅವಳು ಹಿಟ್ಟನ್ನು ತೆಗೆದು ಕಲಸಿ, ಅವನ ಕಣ್ಣು ಮುಂದೆ ನಾದಿ, ಭಕ್ಷ್ಯಗಳನ್ನು ಮಾಡಿ, ಪಾತ್ರೆ ತೆಗೆದುಕೊಂಡು ಅವನ ಮುಂದೆ ಇಟ್ಟಳು.
ಆದರೆ ಅಮ್ನೋನನು, “ನಾನು ಉಣ್ಣುವುದಿಲ್ಲ,” ಎಂದು ಹೇಳಿ, “ನನ್ನ ಬಳಿಯಿಂದ ಎಲ್ಲಾ ಮನುಷ್ಯರನ್ನು ಕಳುಹಿಸಿಬಿಡಿರಿ,” ಎಂದನು. ಹಾಗೆಯೇ ಎಲ್ಲರು ಅವನನ್ನು ಬಿಟ್ಟುಹೋದರು. 10 ಆಗ ಅಮ್ನೋನನು, “ನಾನು ನಿನ್ನ ಕೈಯಿಂದ ತಿನ್ನುವಂತೆ ಆ ಭಕ್ಷ್ಯಗಳನ್ನು ಕೊಠಡಿಯೊಳಗೆ ತೆಗೆದುಕೊಂಡು ಬಾ,” ಎಂದನು. ಹಾಗೆಯೇ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಕೊಠಡಿಯೊಳಗೆ ತನ್ನ ಸಹೋದರನಾದ ಅಮ್ಮೋನನ ಬಳಿಗೆ ತೆಗೆದುಕೊಂಡು ಬಂದಳು. 11 ಅವನು ಅವುಗಳನ್ನು ಉಣ್ಣುವ ಹಾಗೆ ಅವಳು ಅವನ ಬಳಿಗೆ ತಂದಾಗ, ಅವನು ಅವಳನ್ನು ಹಿಡಿದು ಅವಳಿಗೆ, “ನನ್ನ ಸಹೋದರಿಯೇ, ನನ್ನ ಸಂಗಡ ಮಲಗು ಬಾ,” ಎಂದನು.
12 ಅದಕ್ಕವಳು, “ನನ್ನ ಸಹೋದರನೇ, ಬೇಡ. ನನ್ನನ್ನು ಒತ್ತಾಯ ಮಾಡಬೇಡ. ಏಕೆಂದರೆ ಇಸ್ರಾಯೇಲಿನಲ್ಲಿ ಇಂಥ ಕಾರ್ಯ ಮಾಡಕೂಡದು. ಇಂಥ ದುಷ್ಟತನದ ಕೆಲಸ ಮಾಡಬೇಡ. 13 ಈ ಅವಮಾನವನ್ನು ಮರೆಮಾಡುವುದು ಹೇಗೆ? ನೀನು ಇಸ್ರಾಯೇಲಿನಲ್ಲಿ ದುಷ್ಟ ಮೂರ್ಖರೊಳಗೆ ಒಬ್ಬನಾಗಿ ಇರುವೆ. ಹಾಗಾದರೆ ಈಗ ದಯಮಾಡಿ ಅರಸನ ಸಂಗಡ ಮಾತನಾಡು. ಏಕೆಂದರೆ ಅವನು ನಿನ್ನ ಬಳಿಯಿಂದ ನನ್ನನ್ನು ಹೇಗಾದರೂ ಹಿಂತೆಗೆಯುವುದಿಲ್ಲ,” ಎಂದಳು. 14 ಆದರೆ ಅವನು ಅವಳ ಮಾತನ್ನು ಕೇಳಲಿಲ್ಲ. ಅಮ್ನೋನನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಅವನು ಬಲಾತ್ಕಾರದಿಂದ ಅವಳ ಮೇಲೆ ಅತ್ಯಾಚಾರಮಾಡಿದನು.
15 ಅನಂತರ ಅಮ್ನೋನನು ಅವಳನ್ನು ಅತ್ಯಂತ ಹಗೆ ಮಾಡಿದನು. ಅವಳನ್ನು ಹಗೆ ಮಾಡುವ ಮೊದಲು ಮಾಡಿದ ಪ್ರೀತಿಗಿಂತ ಅದು ಅಧಿಕವಾಗಿತ್ತು. ಆದ್ದರಿಂದ, ಅಮ್ನೋನನು ಅವಳಿಗೆ, “ಎದ್ದು ಹೋಗು,” ಎಂದನು.
16 ಆಗ ಅವಳು ಅವನಿಗೆ, “ಬೇಡ! ನನಗೆ ಮಾಡಿದ ಆ ಕೆಟ್ಟತನಕ್ಕಿಂತ, ನೀನು ನನ್ನನ್ನು ಕಳುಹಿಸಿಬಿಡುವ ಈ ಕೆಟ್ಟತನವು ಅಧಿಕ ಅನ್ಯಾಯವಾಗಿದೆ,” ಎಂದಳು.
ಆದರೆ ಅವನು ಅವಳ ಮಾತನ್ನು ಕೇಳಲೊಲ್ಲದೆ 17 ಯಾವಾಗಲೂ ತನ್ನೊಂದಿಗೆ ಇರುತ್ತಿದ್ದ ಸೇವಕನನ್ನು ಕರೆದು, “ಇವಳನ್ನು ನನ್ನ ಬಳಿಯಿಂದ ಹೊರಗೆ ತಳ್ಳಿ, ಅವಳ ಹಿಂದೆ ಬಾಗಿಲು ಮುಚ್ಚಿ ಭದ್ರಪಡಿಸು,” ಎಂದನು. 18 ಅವಳು ವಿವಿಧ ಬಣ್ಣದ ವಸ್ತ್ರಗಳನ್ನು ಧರಿಸಿದ್ದಳು. ಏಕೆಂದರೆ ಅರಸನ ಪುತ್ರಿಯರಾದ ಕನ್ಯೆಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಅವನ ಸೇವಕನು ಅವಳನ್ನು ಹೊರಗೆ ತಂದು, ಅವಳ ಹಿಂದೆ ಬಾಗಿಲು ಮುಚ್ಚಿ ಬೀಗ ಹಾಕಿದನು. 19 ಆಗ ತಾಮಾರಳು ತನ್ನ ತಲೆಯ ಮೇಲೆ ಬೂದಿಯನ್ನು ಹಾಕಿಕೊಂಡು, ತಾನು ಧರಿಸಿಕೊಂಡಿದ್ದ ವಿವಿಧ ಬಣ್ಣದ ವಸ್ತ್ರವನ್ನು ಹರಿದು, ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಗಟ್ಟಿಯಾಗಿ ಅಳುತ್ತಾ ಹೋದಳು.
20 ಆಗ ಅವಳ ಸಹೋದರ ಅಬ್ಷಾಲೋಮನು ಅವಳಿಗೆ, “ನಿನ್ನ ಸಹೋದರ ಅಮ್ನೋನನು ನಿನ್ನ ಮಾನಭಂಗ ಮಾಡಿದನೋ? ನನ್ನ ಸಹೋದರಿ, ಈಗ ಸುಮ್ಮನಿರು. ಅವನು ನಿನ್ನ ಸಹೋದರನು. ಈ ಕಾರ್ಯವನ್ನು ನಿನ್ನ ಮನಸ್ಸಿಗೆ ತೆಗೆದುಕೊಳ್ಳಬೇಡ,” ಎಂದನು. ಹಾಗೆಯೇ ತಾಮಾರಳು ತನ್ನ ಸಹೋದರ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿ ವಾಸಿಸಿದಳು.
21 ಅರಸನಾದ ದಾವೀದನು ಇವುಗಳನ್ನೆಲ್ಲಾ ಕೇಳಿದಾಗ ಬಹು ಕೋಪಗೊಂಡನು. 22 ಆದರೆ ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೆಯದಾದರೂ, ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಏಕೆಂದರೆ ಅವನು ತನ್ನ ಸಹೋದರಿಯಾದ ತಾಮಾರಳನ್ನು ಅವಮಾನ ಮಾಡಿದ್ದರಿಂದ, ಅಬ್ಷಾಲೋಮನು ಅವನನ್ನು ಹಗೆ ಮಾಡಿದನು.
ಅಬ್ಷಾಲೋಮನು ಅಮ್ಮೋನನನ್ನು ಕೊಂದದ್ದು
23 ಎರಡು ವರ್ಷ ಪೂರ್ಣ ಮುಗಿದ ತರುವಾಯ, ಅಬ್ಷಾಲೋಮನಿಗೆ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವಾಗ, ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು. 24 ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ, “ಇಗೋ, ಈಗ ನಿನ್ನ ಸೇವಕನ ಬಳಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ, ತನ್ನ ಸೇವಕರೂ ನಿನ್ನ ಸೇವಕನ ಬಳಿಗೆ ಬರಬಹುದೋ?” ಎಂದನು.
25 ಅದಕ್ಕೆ ಅರಸನು ಅಬ್ಷಾಲೋಮನಿಗೆ, “ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವುದಿಲ್ಲ,” ಎಂದನು. ಅವನು ರಾಜನನ್ನು ಬಲವಂತ ಮಾಡಿದನು. ಆದರೆ ಅರಸನು ಹೋಗಲು ಒಪ್ಪದೆ, ಅಬ್ಷಾಲೋಮನನ್ನು ಆಶೀರ್ವದಿಸಿ ಕಳುಹಿಸಿದನು.
26 ಆಗ ಅಬ್ಷಾಲೋಮನು, “ಹಾಗಾದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ,” ಎಂದನು.
ಅರಸನು ಅವನಿಗೆ, “ಏಕೆ ಅವನು ನಿಮ್ಮ ಸಂಗಡ ಬರಬೇಕು?” ಎಂದನು. 27 ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ, ಅವನು ಅಮ್ನೋನನನ್ನೂ, ಅರಸನ ಸಮಸ್ತ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು.
28 ಅಬ್ಷಾಲೋಮನು ತನ್ನ ಸೇವಕರಿಗೆ, “ನೀವು ನೋಡಿಕೊಳ್ಳಿರಿ. ಅಮ್ನೋನನ ಮನಸ್ಸು ದ್ರಾಕ್ಷಾರಸದಿಂದ ಅಮಲೇರಿದಾಗ ನಾನು ನಿಮಗೆ ಅವನನ್ನು ಹೊಡೆಯಿರಿ ಎಂದು ಹೇಳಿದಕೂಡಲೆ, ಅವನನ್ನು ಕೊಂದುಹಾಕಿರಿ, ಭಯಪಡಬೇಡಿರಿ. ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ, ಧೈರ್ಯವಾಗಿರಿ, ಶೂರರಾಗಿರಿ,” ಎಂದು ಹೇಳಿದನು. 29 ಅಬ್ಷಾಲೋಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆಲ್ಲರೂ ಎದ್ದು, ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.
30 ಅವರು ದಾರಿಯಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಕೊಂದುಹಾಕಿದ್ದಾನೆ, ಒಬ್ಬನಾದರೂ ಉಳಿಯಲಿಲ್ಲ,” ಎಂಬ ವರ್ತಮಾನ ಬಂತು. 31 ಆಗ ಅರಸನು ಎದ್ದು, ತನ್ನ ವಸ್ತ್ರಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಅವನ ಸುತ್ತಲು ನಿಂತರು.
32 ಆದರೆ ದಾವೀದನ ಸಹೋದರನಾದ ಶಿಮೆಯನ ಮಗನಾಗಿರುವ ಯೋನಾದಾಬನು ದಾವೀದನಿಗೆ, “ಒಡೆಯನೇ, ನನ್ನ ಅರಸನ ಪುತ್ರರೆಲ್ಲರನ್ನು ಕೊಂದು ಹಾಕಿದ್ದಾರೆಂದು ನೆನಸಬೇಡ. ಅಮ್ನೋನನು ಮಾತ್ರವೇ ಸತ್ತನು. ಏಕೆಂದರೆ ಅಬ್ಷಾಲೋಮನು ತನ್ನ ಸಹೋದರಿಯಾದ ತಾಮಾರಳನ್ನು ಅಮ್ಮೋನನು ಬಲಾತ್ಕಾರ ಮಾಡಿದ ದಿನ ಮೊದಲುಗೊಂಡು ಈ ಕಾರ್ಯವನ್ನು ಮಾಡುವುದಕ್ಕೆ ತನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡಿದ್ದನು. 33 ಆದ್ದರಿಂದ ಅರಸನಾದ ನನ್ನ ಒಡೆಯನೇ, ಅರಸನ ಮಕ್ಕಳೆಲ್ಲರು ಸತ್ತರೆಂಬುವ ಮಾತನ್ನು ನಿನ್ನ ಮನಸ್ಸಿನಲ್ಲಿಡಬೇಡ. ಏಕೆಂದರೆ ಅಮ್ನೋನನು ಒಬ್ಬನೇ ಸತ್ತನು,” ಎಂದನು.
34 ಅಬ್ಷಾಲೋಮನು ಓಡಿಹೋದನು.
ಆಗ ಕಾವಲುಗಾರನು ಕಣ್ಣೆತ್ತಿ ನೋಡುವಾಗ, ಅವನ ಹಿಂಭಾಗದಲ್ಲಿ ಬೆಟ್ಟದ ಮಾರ್ಗವಾಗಿ ಅನೇಕ ಜನರು ಬರುತ್ತಿದ್ದರು. ಕಾವಲುಗಾರನು ಹೋಗಿ ಅರಸನಿಗೆ, “ನಾನು ಬೆಟ್ಟದ ಬದಿಯಲ್ಲಿರುವ ಹೋರೋನೈಮ್ ದಿಕ್ಕಿನಲ್ಲಿ ಮನುಷ್ಯರನ್ನು ಕಂಡೆನು,”* ಎಂದು ಹೇಳಿದನು.
35 ಆಗ ಯೋನಾದಾಬನು ಅರಸನಿಗೆ, “ಅರಸನ ಪುತ್ರರು ಬರುತ್ತಿದ್ದಾರೆ. ನಿಮ್ಮ ಸೇವಕನು ಹೇಳಿದ ಹಾಗೆಯೇ ಆಯಿತು,” ಎಂದನು.
36 ಅವನು ಮಾತನಾಡಿ ತೀರಿಸಿದಾಗ, ಅರಸನ ಪುತ್ರರು ಬಂದು ಸ್ವರವೆತ್ತಿ ಅತ್ತರು. ಅರಸನೂ, ಅವನ ಸಮಸ್ತ ಸೇವಕರೂ ಮಹಾಧ್ವನಿಯಿಂದ ಅತ್ತರು.
37 ಆದರೆ ಅಬ್ಷಾಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅಮ್ಮೀಹೂದನ ಮಗ ತಲ್ಮಾಯನ ಬಳಿಗೆ ಹೋದನು. ದಾವೀದನು ಬಹಳ ದಿನಗಳವರೆಗೆ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು.
38 ಹೀಗೆಯೇ ಅಬ್ಷಾಲೋಮನು ಗೆಷೂರಿಗೆ ಓಡಿಹೋಗಿ ಅಲ್ಲಿ ಮೂರು ವರ್ಷ ಇದ್ದನು. 39 ಆದರೆ ಅರಸನಾದ ದಾವೀದನು ಅಮ್ನೋನನ ಸಾವಿನ ದುಃಖ ಶಮನವಾದ ಮೇಲೆ ಅಬ್ಷಾಲೋಮನ ಬಳಿಗೆ ಹೋಗಲು ಬಯಸಿದನು.
* 13:34 13:34 ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಇರುವುದಿಲ್ಲ